ADVERTISEMENT

156 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವ ಇದೇ 22ರಂದು ನಡೆಯಲಿದೆ. ನವದೆಹಲಿಯ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ.ಗುರುಬಚನ್ ಸಿಂಗ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು  ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ವಿ. ಪಾಟೀಲ್ ಹೇಳಿದರು.

ಘಟಿಕೋತ್ಸವದ ಅಧ್ಯಕ್ಷತೆಯನ್ನು ರಾಜ್ಯ ಕೃಷಿ ಖಾತೆ ಸಚಿವ ಹಾಗೂ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಉಮೇಶ ಕತ್ತಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

156 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ: 97 ಸ್ನಾತಕ (68 ಕೃಷಿ ಪದವಿ ಮತ್ತು 29 ಕೃಷಿ ತಾಂತ್ರಿಕ ಪದವಿ) ಹಾಗೂ 59 ಸ್ನಾತಕೋತ್ತರ ಪದವಿ ಸೇರಿದಂತೆ 156 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತಿದೆ ಎಂದರು.

ರೈತ ವಿಜ್ಞಾನಿ ಪ್ರಶಸ್ತಿ: ರೈತ ಬಾಂಧವರನ್ನು ಪ್ರೋತ್ಸಾಹಿಸಲು ಈ ವರ್ಷದಿಂದ ಕೃಷಿ ವಿವಿ ವ್ಯಾಪ್ತಿಯ ಒಬ್ಬ ಶ್ರೇಷ್ಠ ರೈತ/ ಶ್ರೇಷ್ಠ ರೈತ ಮಹಿಳೆಯನ್ನು ಗುರುತಿಸಿ ಅವರಿಗೆ ರೈತ ವಿಜ್ಞಾನಿ ಅಥವಾ ರೈತ ಮಹಿಳಾ ವಿಜ್ಞಾನಿ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿಯು 50 ಸಾವಿರ ನಗದು, ಪ್ರಶಸ್ತಿ ಫಲಕವನ್ನು ಹೊಂದಿರುತ್ತದೆ ಎಂದು ಹೇಳಿದರು.

ಅದೇ ರೀತಿ ಬೋಧನೆ, ಸಂಶೋಧನೆ ಹಾಗೂ ವಿಸ್ತರಣೆ ವಿಭಾಗವಾರು ಒಬ್ಬ ವಿಜ್ಞಾನಿಯನ್ನು ಆಯ್ಕೆ ಮಾಡಿ ಕ್ರಮವಾಗಿ ಅತ್ಯುತ್ತಮ ಶಿಕ್ಷಕ, ಅತ್ಯುತ್ತಮ ಸಂಶೋಧಕ ಹಾಗೂ ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಕೃಷಿ ವಿವಿ ವ್ಯಾಪ್ತಿಯಲ್ಲಿ ಒಟ್ಟು 11 ಕೃಷಿ ಸಂಶೋಧನಾ ಕೇಂದ್ರಗಳಿವೆ.  ಅವುಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅತ್ಯುತ್ತಮ ಕೃಷಿ ಸಂಶೋಧನಾ ಕೇಂದ್ರ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.

ವಿವಿಯ ಶಿಕ್ಷಕೇತರ ವಿಭಾಗದಲ್ಲೂ ಅತ್ಯುತ್ತಮ ಕ್ಷೇತ್ರ ಸಹಾಯಕ, ಅತ್ಯುತ್ತಮ ಸೇವಾ ಸಿಬ್ಬಂದಿ ಹಾಗೂ ಅತ್ಯುತ್ತಮ ಕೃಷಿ ಕಾರ್ಮಿಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಹೇಳಿದರು.ವಿವಿಧ ಪ್ರಶಸ್ತಿಗೂ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಆಯ್ಕೆಗೊಂಡ ಹೆಸರನ್ನು ಘಟಿಕೋತ್ಸವದಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.