ADVERTISEMENT

27ರಿಂದ ಸಾರಿಗೆ ನಿಗಮ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:10 IST
Last Updated 24 ಏಪ್ರಿಲ್ 2012, 8:10 IST

ರಾಯಚೂರು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕರ ಸಂಘಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ಇದೇ 27ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ಸಾರಿಗೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಶೈಲರೆಡ್ಡಿ ಅವರು ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಯ ಕಾರ್ಮಿಕರ ಮೇಲೆ ಒತ್ತಡ ಹೇರಿ ಕೆಲಸ ಪಡೆಯುತ್ತಿರುವುದನ್ನು ನಿಲ್ಲಿಸಬೇಕು ಎಂದು ಅನೇಕ ಬಾರಿ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಸಾರಿಗೆ ಇಲಾಖೆಯಲ್ಲಿ ಕಾರ್ಮಿಕರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, ಇವುಗಳನ್ನು ತಡೆಗಟ್ಟಬೇಕು, ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ಕಲ್ಪಿಸುವುದು, ಸಿಬ್ಬಂದಿ ನೇಮಕ ಮಾಡಬೇಕು, ಅನಗತ್ಯ ಕಿರಿಕಿರಿ ತಪ್ಪಿಸಬೇಕು. 8-10 ಜನ ಮಾಡುವ ಕೆಲಸವನ್ನು ಕೇವಲ ನಾಲ್ಕು ಜನರಿಂದ ಪಡೆಯುವ ಕಾರ್ಮಿಕ ಮತ್ತು ನೌ ಕರರ ಶೋಷಣೆ ಧೋರಣೆ ಕೈ ಬಿಡಬೇಕು ಎಂಬುದು ಸೇರಿದಂತೆ ಅನೇಕ ಬೇಡಿಕೆ ಈಡೇರಿಕೆಗಾಗಿ ಹಲವು ರೀತಿ ಹೋರಾಟ, ಸಮಾವೇಶ, ಮಾತುಕತೆ ಮೂಲಕ ಪ್ರಯತ್ನಿಸಿದರೂ ಸರ್ಕಾರ ಸ್ಪಂದಿಸಿಲ್ಲ.
 
ಬದಲಾಗಿ ಕಠೋರ ಕ್ರಮಕ್ಕೆ ಮುಂದಾಗುತ್ತಿದೆ. ಎಸ್ಮಾ ಜಾರಿ, ದಿನ ಬೆಳಗಾದರೆ ವರ್ಗಾವಣೆಯಂಥ ಕ್ರಮ ಕೈಗೊಂಡಿದೆ. ಈ ಸ್ಥಿತಿಯಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದು ಅನಿವಾರ್ಯ ಆಗಿದ್ದರಿಂದ ಈಗ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ತಿಳಿಸಿದರು.

ಅಂದು ರಾಜ್ಯದ 29 ವಿಭಾಗಗಳಲ್ಲಿನ ನೌಕರರು ಮತ್ತು ಕಾರ್ಮಿಕರು ಕೆಲಸ ಮಾಡುವುದಿಲ್ಲ. ಸಂಪೂರ್ಣ ಮಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮುಷ್ಕರದಿಂದ ಪ್ರತಿ ದಿನ ರಾಜ್ಯ ಸಾರಿಗೆ ಇಲಾಖೆ 15 ಕೋಟಿ ನಷ್ಟ ಆಗಲಿದೆ ಎಂದು ಹೇಳಿದರು. ಕಾರ್ಮಿಕರು ಚಳುವಳಿ ನಡೆಸದಂತೆ ಕಾರ್ಮಿಕರ ಅಮಾನತು, ವರ್ಗಾವಣೆ ಹಾಗೂ ಮೊಕದ್ದಮೆ ಹೂಡುತ್ತಿರುವುದು ಸೇರಿದಂತೆ ಅನೇಕ ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಆಪಾದಿಸಿದರು.

7ಜನ ಕಾರ್ಮಿಕರು ಮಾಡುವ ಕೆಲಸವನ್ನು 4 ಜನ ಕಾರ್ಮಿಕರು ಕೆಲಸ ನಿರ್ವಹಿಸಬೇಕು ಒತ್ತಡ ಹಾಕಲಾಗುತ್ತಿದೆ. ಪ್ರತಿ ನೂರು ಬಸ್‌ಗಳಿಗೆ  90 ಜನ ದುರಸ್ತಿಗಾರರಬೇಕಾಗುತ್ತದೆ. ಆದರೆ, ಪ್ರತಿ ನೂರ ಬಸ್‌ಗೆ 50 ಜನ ದುರಸ್ತಿಗಾರರನ್ನು ಒದಗಿಸಲಾಗಿದೆ. ಇದರಿಂದ ಕಾರ್ಮಿಕರ ಮೇಲೆ ಹೆಚ್ಚಿನ ಒತ್ತಡ ಹಾಕಲಾಗುತ್ತಿದೆ ಎಂದು ಸಮಸ್ಯೆಯನ್ನು ವಿವರಿಸಿದರು.

ಸರ್ಕಾರ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕುಗಳನ್ನು ನೀಡಬೇಕು, ಜಂಟಿ ಸಮಿತಿಯೊಂದಿಗೆ ಚರ್ಚೆ ನಡೆಸಿ ವೇತನ  ಒಪ್ಪಂದ ಮಾಡಬೇಕು, ಅಮಾನತು, ಮೊಕದ್ದಮೆ ವರ್ಗಾವಣೆಗಳನ್ನು ಕೂಡಲೇ ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ಇನ್ನೂ ಅನೇಕ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಸಂಘಟನೆ ಅಧ್ಯಕ್ಷ ಮುದ್ದುಕೃಷ್ಣ,  ಪದಾಧಿಕಾರಿಗಳಾದ ಜಗನ್ನಾಥ, ಗುರುನಾಥರೆಡ್ಡಿ ಹಾಗೂ ಸಿದ್ಧರಾಮರೆಡ್ಡಿ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.