ರಾಯಚೂರು: ನಾರಾಯಣಪುರ ಜಲಾಶಯದಿಂದ ಹೊರಹರಿವು ಪ್ರಮಾಣ 2.35 ಲಕ್ಷ ಕ್ಯುಸೆಕ್ಗೆ ಏರಿಕೆಯಾಗಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಪೊಲೀಸರು ಲಿಂಗಸುಗೂರು, ದೇವದುರ್ಗ ಹಾಗೂ ರಾಯಚೂರು ತಾಲ್ಲೂಕಿನ ಕೃಷ್ಣಾ ನದಿ ತೀರ ಪ್ರದೇಶಕ್ಕೆ ಶನಿವಾರ ಬೆಳಿಗ್ಗೆಯೇ ದೌಡಾಯಿಸಿದರು.
ಲಿಂಗಸುಗೂರು ತಾಲ್ಲೂಕಿನ ಯರಗೋಡಿ ಮತ್ತು ಕಡದರದೊಡ್ಡಿ ನಡುಗಡ್ಡೆಯ ಜಮೀನನ್ನು ಆಶ್ರಯಿಸಿದ ಜನರಿಗೆ ಆಹಾರಧಾನ್ಯ ವಿತರಿಸಲಾಯಿತು. ದೇವದುರ್ಗ ಸಮೀಪದ ಹೂವಿನಹೆಡಗಿ ಸೇತುವೆ ಮುಳುಗಲು ಒಂದು ಅಡಿ ಮಾತ್ರ ಬಾಕಿಯಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.ನದಿ ತೀರಕ್ಕೆ ಜನ ಮತ್ತು ಜಾನುವಾರು ಹೋಗದಂತೆ ಸೂಚಿಸಲಾಗಿದೆ. ಪ್ರವಾಹ ಪರಿಸ್ಥಿತಿ ಬಗ್ಗೆ ಜಿಲ್ಲಾಡಳಿತ ನಿಗಾ ವಹಿಸಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕೊಳ್ಳೂರ (ಎಂ) ಬಳಿ ಪ್ರವಾಹ ಸ್ಥಿತಿ ಎದುರಾಗಿದ್ದು, ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿದೆ. ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಜಿಲ್ಲೆಗೆ ಎನ್ಡಿಆರ್ಎಫ್ ತಂಡ
ರಾಯಚೂರುಜಿಲ್ಲೆಯ ಪ್ರವಾಹ ತುರ್ತು ಪರಿಸ್ಥಿತಿ ನಿರ್ವಹಣೆ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಶನಿವಾರ ರಾತ್ರಿ ನಗರಕ್ಕೆ ಬಂದಿದೆ.ತಂಡದಲ್ಲಿ 30 ಪರಿಣಿತರು ಮತ್ತು 2 ಬೋಟ್ಗಳಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.