ಸಿರವಾರ (ರಾಯಚೂರು ಜಿಲ್ಲೆ): ಬೆಂಗಳೂರಿನಿಂದ ರಾಯಚೂರಿನತ್ತ ಬರುತ್ತಿದ್ದ ಕ್ರೂಸರ್ ತುಮಕೂರು ಜಿಲ್ಲೆ ಸಿರಾ ಸಮೀಪ ಮಗುಚಿದ ಪರಿಣಾಮ, ಇಬ್ಬರು ಮಹಿಳೆಯರು ಸೇರಿ ಮೂವರು ಕೂಲಿಕಾರ್ಮಿಕರು ಸ್ಥಳದಲ್ಲೆ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಏಳು ಜನರು ಗಾಯಗೊಂಡಿದ್ದು, ಸಿರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿರವಾರ ಪಟ್ಟಣದ ಮಾಮುನಿ(22), ಕುರಕುಂದಾ ಗ್ರಾಮದ ಹುಸೇನ್ ಬಾಷಾ (25) ಮತ್ತು ಮರಾಠ ಗ್ರಾಮದ ಯಲ್ಲಮ್ಮ (50) ಮೃತಪಟ್ಟವರು. ಸಿರವಾರ ತಾಲ್ಲೂಕಿನಿಂದ ಬೆಂಗಳೂರಿಗೆ ಕಟ್ಟಡ ಕಾಮಗಾರಿ ಹಾಗೂ ಇತರೆ ಕೂಲಿ ಕೆಲಸಕ್ಕಾಗಿ ಗುಳೆ ಹೋಗುವವರನ್ನು ಕರೆದೊಯ್ಯುವುದು ಹಾಗೂ ಅಲ್ಲಿಂದ ವಾಪಸಾಗುವವರನ್ನು ಕರೆತರುವ ಕಾರ್ಯವನ್ನು ವಾರದಲ್ಲಿ ಎರಡು ದಿನ ಕ್ರೂಸರ್ಗಳು ಮಾಡುತ್ತವೆ.
ಬುಧವಾರ ಮತ್ತು ಶನಿವಾರ ಸಿರವಾರ ಪಟ್ಟಣದಿಂದ ಸುಮಾರು ಎಂಟು ಕ್ರೂಸರ್ಗಳನ್ನು ಕೂಲಿಗಳನ್ನು ತುಂಬಿಕೊಂಡು ಬೆಂಗಳೂರಿಗೆ ಪ್ರತಿವಾರ ನಿಯಮಿತವಾಗಿ ಸಂಚರಿಸುತ್ತವೆ. ಅಲ್ಲಿಂದ ಮರುದಿನ ವಾಪಸಾಗುತ್ತವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.