ಶಕ್ತಿನಗರ: ದೇವಸುಗೂರು ಹೋಬಳಿ ವ್ಯಾಪ್ತಿಯಲ್ಲಿ ಎರಡು ದಿನ ಸುರಿದ ಮಳೆಗೆ 68 ಮನೆಗಳು ಭಾಗಶಃ ಕುಸಿದಿವೆ.
ದೇವಸೂಗೂರು–12, ಗಂಜಳ್ಳಿ–18, ಹನುಮನದೊಡ್ಡಿ –5, ಹೆಗ್ಗಸನಹಳ್ಳಿ –2, ಅರಷಣಿಗಿ–15, ಮೀರಾಪುರ–12 ಮತ್ತು ಕಾಡ್ಲೂರು ಗ್ರಾಮದಲ್ಲಿ 6 ಮನೆಗಳು ಕುಸಿದಿವೆ.
ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ಮಧುಕಾಂತ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು,‘ಮಳೆಗೆ ಕುಸಿದ ಮನೆಗಳ ವೀಕ್ಷಣೆಗೆ ಸಮೀಕ್ಷಾ ತಂಡ ಆಗಮಿಸಲಿದೆ. ಎಷ್ಟು ಮನೆಗಳು ನೆಲಸಮವಾಗಿವೆ ಮತ್ತು ಎಷ್ಟು ಭಾಗಶಃ ಕುಸಿದಿವೆ ಎನ್ನುವ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹೇಳಿದರು.
ಸಗಮಕುಂಟ ಗ್ರಾಮದಲ್ಲಿ 20 ಹೆಕ್ಟೇರ್, ಯರಗುಂಟ–30 ಹೆಕ್ಟೇರ್, ವಡ್ಲೂರು–40 ಹೆಕ್ಟೇರ್ ಸೇರಿ ಒಟ್ಟು 90 ಹೆಕ್ಟೇರ್ ಪ್ರದೇಶದಲ್ಲಿ ಭತ್ತ, ಹತ್ತಿ ಹಾಗೂ ತೊಗರಿ ಬೆಳೆ ನಾಶವಾಗಿದೆ ಎಂದು ದೇವಸೂಗೂರು ರೈತ ಸಂಪರ್ಕ ಕೇಂದ್ರದ ಪ್ರಭಾರ ಅಧಿಕಾರಿ ಸಂಜಯ ಅವರು ತಿಳಿಸಿದರು.
ಹೋಬಳಿ ವ್ಯಾಪ್ತಿಯಲ್ಲಿ ಸತತವಾಗಿ ಎರಡು ದಿನ ಸುರಿದ ಮಳೆಯಿಂದ ಆಗಿರುವ ಪರಿಣಾಮಗಳು ಈಗ ಗೋಚರಿಸುತ್ತಿವೆ.
ಜಲಾವೃತ್ತವಾಗಿದ್ದ ಹಲವು ಬಡಾವಣೆಗಳಲ್ಲಿ ಮನೆಗಳ ಗೋಡೆಗಳು ಕುಸಿದು ಬಿದ್ದಿದ್ದು , ಜನರು ಬೀದಿಗೆ ಬಂದಿದ್ದಾರೆ. ರಸ್ತೆಗಳು ಕೂಡ ಹಾಳಾಗಿವೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿರುವುದು ನೋಡಿ, ರೈತರ ದಿಕ್ಕು ತೋಚದಂತೆ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.