ADVERTISEMENT

ಬೀದಿಬದಿ ವ್ಯಾಪಾರಿಗಳಿಗೆ ಸೌಲಭ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 12:29 IST
Last Updated 16 ಏಪ್ರಿಲ್ 2021, 12:29 IST
ಲಿಂಗಸುಗೂರಲ್ಲಿ ಬೀದಿಬದಿ ವ್ಯಾಪಾರಿಗಳ ಮಹಾಮಂಡಲ ತಾಲ್ಲೂಕು ಘಟಕ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು
ಲಿಂಗಸುಗೂರಲ್ಲಿ ಬೀದಿಬದಿ ವ್ಯಾಪಾರಿಗಳ ಮಹಾಮಂಡಲ ತಾಲ್ಲೂಕು ಘಟಕ ಪದಾಧಿಕಾರಿಗಳು ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು   

ಲಿಂಗಸುಗೂರು: ‘ಬೀದಿಬದಿ ವ್ಯಾಪಾರಿಗಳಿಗೆ ಜೀವನ ಭದ್ರತೆ ಒದಗಿಸಲು ಸ್ಥಳೀಯ ಸಂಸ್ಥೆಗಳು ವ್ಯಾಪಾರ ಘಟಕಗಳನ್ನು ರಚಿಸಿ, ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು‘ ಎಂದು ಆಗ್ರಹಿಸಿ ಬೀದಿಬದಿ ವ್ಯಾಪಾರಿಗಳ ಮಹಾಮಂಡಲ ತಾಲ್ಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ ಅವರಿಗೆ ಮನವಿ ಸಲ್ಲಿಸಿದರು.

‘ರಸ್ತೆ ಬದಿ ವ್ಯಾಪಾರಿಗಳ ಅನುಕೂಲಕ್ಕೆ ಮಾರುಕಟ್ಟೆ ಸಮಿತಿ ರಚಿಸಲಾಗಿದೆ. ಸಮಿತಿ ಸದಸ್ಯರನ್ನು ಕನಿಷ್ಠ ಮೂರು ತಿಂಗಳಿಗೊಮ್ಮೆ ಏಳು ದಿನಗಳ ನೋಟಿಸ್‍ ನೀಡಿ ಸಭೆ ಕರೆದು ಕುಂದುಕೊರತೆ ವಿಚಾರಣೆ ಮಾಡುವುದನ್ನು ನಿರ್ಲಕ್ಷ್ಯವಹಿಸಿದ್ದು ಕೂಡಲೆ ಸಭೆ ಕರೆದು ಚರ್ಚಿಸಿ ನ್ಯಾಯ ಒದಗಿಸಬೇಕು ಎಂದು‘ ಘಟಕದ ಪದಾಧಿಕಾರಿಗಳು ಹೇಳಿದರು.

‘ಸಮಾನಮನಸ್ಕರನ್ನು ಗುರುತಿಸಿ ಪ್ರಧಾಮಮಂತ್ರಿ ಆತ್ಮ ನಿರ್ಭರ್ ಯೋಜನೆಯಡಿ ಗುಂಪು ರಚಿಸಿ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಮಹಿಳೆಯರು ಉತ್ಪನ್ನ ಮಾಡುವ ವಸ್ತುಗಳ ಮಾರಾಟಕ್ಕೆ ಪ್ರತ್ಯೇಕ ವಲಯ ಸ್ಥಾಪಿಸಬೇಕು. ವ್ಯಾಪಾರ, ಆಹಾರ ಪದಾರ್ಥ, ಹೂವು, ಹಣ್ಣು, ತರಕಾರಿ, ಹೊಲಿಗೆ ಸಾಮಗ್ರಿ ಸೇರಿದಂತೆ ಇತರೆ ವಲಯಗಳನ್ನು ಗುರುತಿಸಿ ಪ್ರತ್ಯೆಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿಕೊಡಲು ಪುರಸಭೆ ಆಡಳಿತ ಮಂಡಳಿ ಮುಂದಾಗಬೇಕು‘ ಎಂದು ಆಗ್ರಹಪಡಿಸಿದರು.

ADVERTISEMENT

ಮಹಿಳೆಯರು, ಅಂಗವಿಕಲರಿಗಾಗಿ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರಿಗೆ ವಿಶೇಷ ಆದ್ಯತೆ ನೀಡಲು ನಿಯಮ ಇದ್ದರು ಡೇ ನಲ್ಮ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೀದಿ ಬದಿ ವ್ಯಾಪಾರಿಗಳಿಗೆ ಯಾವೊಂದು ಸೌಲಭ್ಯ ಸಿಗುತ್ತಿಲ್ಲ. ಕಾರಣ ತುರ್ತು ಸಭೆ ಕರೆದು ಅಗತ್ಯ ತರಬೇತಿ, ವೈದ್ಯಕೀಯ ತಪಾಸಣೆ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಮುಂದಾಗದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬೀದಿಬದಿ ವ್ಯಾಪಾರಿಗಳ ಮಹಾಮಂಡಲ ತಾಲ್ಲೂಕು ಘಟಕದ ಅಧ್ಯಕ್ಷ ಮಹೆಬೂಬ, ಶರಣಬಸವ, ಬಸವರಾಜ ಹಿರೇಮಠ, ಮಹಾಂತೇಶ, ಮೊಹ್ಮದ ಬಿರಾದರ, ಕೇಶವರಾಜ್‍, ಪಂಪಣ್ಣ ಹೂಗಾರ, ಅಮರೇಶ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.