ADVERTISEMENT

ರಾಯಚೂರು: ಪಹಣಿ ಪ್ರಕರಣಗಳ ತ್ವರಿತ ವಿಲೇವಾರಿ

ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 15:57 IST
Last Updated 9 ಸೆಪ್ಟೆಂಬರ್ 2020, 15:57 IST
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅಧ್ಯಕ್ಷತೆಯಲ್ಲಿ ಪಹಣಿ ಸಮಿತಿ ಸಭೆ ಮಂಗಳವಾರ ನಡೆಯಿತು
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅಧ್ಯಕ್ಷತೆಯಲ್ಲಿ ಪಹಣಿ ಸಮಿತಿ ಸಭೆ ಮಂಗಳವಾರ ನಡೆಯಿತು   

ರಾಯಚೂರು: ಉಪವಿಭಾಗದಲ್ಲಿ ಬಾಕಿ ಉಳಿದಿರುವ ಆರ್.ಟಿ.ಸಿ ಮತ್ತು ಪಹಣಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಅವರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಪಹಣಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರೈತರಿಗೆ ಪಹಣಿ ಪತ್ರ (ಆರ್.ಟಿ.ಸಿ) ಬಹಳ ಮುಖ್ಯವಾಗಿರುತ್ತದೆ. ಭೂಮಿಯ ಮೇಲಿನ ಅವನ ಹಕ್ಕು, ಸಾಲ, ಅಡಮಾನ ಸೇರಿದಂತೆ ವಿವಿಧ ಕೆಲಸಗಳಿಗೆ ಪಹಣಿ ಪತ್ರದ ಇರುವಿಕೆ ಅವಶ್ಯಕ. ಅದರಲ್ಲಿ ಏನಾದರೂ ದೋಷ ಇದ್ದರೆ, ರೈತರು ಕಂದಾಯ ಕಚೇರಿಗಳಿಗೆ, ಸರ್ವೇ ಕಚೇರಿಗೆ, ಬ್ಯಾಂಕ್‌ಗಳಿಗೆ ಅಲೆದಾಡಬೇಕಾಗುವ ಸಂದರ್ಭಗಳಿರುತ್ತವೆ ಎಂದು ಹೇಳಿದರು.

ADVERTISEMENT

ಪಹಣಿಗಳ ದೋಷ, ಮೋಜನಿ ತಿದ್ದುಪಡಿ ದೋಷ, ಕಾಲಂ ನಂ. 3 ಮತ್ತು 9 ರಲ್ಲಿ ವ್ಯತ್ಯಾಸ ಇರುವುದು, ಈ ರೀತಿ ದೋಷಗಳಿಂದಾಗಿ ರೈತರು ಭೂಮಿ ವಿಷಯದಲ್ಲಿ ಸರ್ಕಾರದ ಸೌಲಭ್ಯ ಪಡೆಯುವುದಾಗಲಿ, ಭೂಮಿ ಮಾರಾಟ ಮಾಡುವಂತಹ ಕೆಲಸಗಳಿಗೆ, ಭೂಮಿ ಅಡಮಾನ ಕೆಲಸಗಳಿಗೆ ಅಡ್ಡಿಯಾಗುತ್ತದೆ. ಈ ಭೂಮಿ ಮೋಜನಿ, ಪಹಣಿ ತಿದ್ದುಪಡಿ ಮಾಡುವುದು ಕಂದಾಯ ಇಲಾಖೆಯ ಪ್ರಧಾನ ಕೆಲಸ. ಈ ಮುಖ್ಯವಾದ ಕೆಲಸವು ಕೋವಿಡ್ ಹಿನ್ನೆಲೆಯಲ್ಲಿ ಕೆಲವು ಸಮಯದವರೆಗೆ ಸ್ಥಗಿತಗೊಂಡಿತ್ತು. ಈಗ ಕೋವಿಡ್ ಕೆಲಸದ ಜೊತೆ ಜೊತೆಗೆ ಅರ್ಜಿಗಳ ವಿಲೇವಾರಿ ಮುಂದುವರೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಪ್ರಕರಣಗಳ ಶೀಘ್ರ ವಿಲೇವಾರಿಗೆ ಅಧಿಕಾರಿಗಳ ತಂಡ ರಚನೆ ಮಾಡಲಾಯಿತು. ಮತ್ತು ಈ ತಂಡಗಳಿಗೆ ಪ್ರತಿ ವಾರದ ಗುರಿ ನಿಗದಿ ಪಡಿಸಿದ್ದು, ಅದರಂತೆ ಕೆಲಸ ನಿರ್ವಹಿಸಿ ವರದಿ ಸಲ್ಲಿಸುವಂತೆಯೂ ಸೂಚಿಸಲಾಯಿತು.

ಉಪವಿಭಾಗದ ತಾಲ್ಲೂಕುಗಳ ತಹಶೀಲ್ದಾರರು, ಸಂಬಂಧಿತ ಎ.ಡಿ.ಎಲ್.ಆರ್ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.