ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ನಡೆದ ಅಗ್ನಿಪಥ ಸೇನಾ ನೇಮಕಾತಿ ರ್ಯಾಲಿಯಲ್ಲಿ ಭಾಗವಹಿಸಲು ಬೆಳಗಿನ ಜಾವ ಸರತಿ ಸಾಲಿನಲ್ಲಿ ನಿಂತಿದ್ದ ಯುವಕರು
ರಾಯಚೂರು: ಅಗ್ನಿಪಥ ಸೇನಾ ಭರ್ತಿ ರ್ಯಾಲಿಯ ಎರಡನೇ ದಿನವಾದ ಶನಿವಾರ ಕಲ್ಯಾಣ ಕರ್ನಾಟಕದ ನಾಲ್ಕು ಜಿಲ್ಲೆಗಳ 860 ಅಭ್ಯರ್ಥಿಗಳು ದೈಹಿಕ ಹಾಗೂ ವೈದ್ಯಕೀಯ ಪರೀಕ್ಷೆಗೆ ಹಾಜರಾದರು.
ಕೊಪ್ಪಳ ಜಿಲ್ಲೆಯ 83 ಅಭ್ಯರ್ಥಿಗಳು, ಯಾದಗಿರಿ ಜಿಲ್ಲೆಯ 251 ಅಭ್ಯರ್ಥಿಗಳು, ಕಲಬುರಗಿ ಜಿಲ್ಲೆಯ 445 ಮತ್ತು ಬೀದರ್ ಜಿಲ್ಲೆಯ 81 ಅಭ್ಯರ್ಥಿಗಳು ಸೇರಿ ಒಟ್ಟು 860 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾದರು.
ದೈಹಿಕ ಪರೀಕ್ಷೆಯಲ್ಲಿ ಭಾಗವಹಿಸಿದ ಆರು ಜಿಲ್ಲೆಗಳ 860 ಅಭ್ಯರ್ಥಿಗಳು ಬೆಳಿಗ್ಗೆ 5 ಗಂಟೆಯಿಂದ 9.30ರ ವರೆಗೆ ಏಳು ಗುಂಪುಗಳಲ್ಲಿ ತಲಾ 4 ಸುತ್ತಿನ 1,600 ಮೀಟರ್ ಓಟ ಮುಕ್ತಾಯಗೊಳಿಸಿದರು.
ಬಳಿಕ ಅಭ್ಯರ್ಥಿಗಳಿಗೆ ಅಲ್ಪ ವಿರಾಮ ನೀಡಲಾಯಿತು. ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.
ಆಗಸ್ಟ್ 9ರಂದು ನೋಂದಣಿ ಮಾಡಿದ ಅಭ್ಯರ್ಥಿಗಳಲ್ಲಿ 735 ಅಭ್ಯರ್ಥಿಗಳು ಓಟದಲ್ಲಿ ಭಾಗವಹಿಸಿದರು. ಈ ಪೈಕಿ 379 ಅಭ್ಯರ್ಥಿಗಳು ಓಟದ ಪರೀಕ್ಷೆಯಲ್ಲಿ ತೇರ್ಗಡೆಯಾದರು.
ಓಟದ ಸುತ್ತಿನಲ್ಲಿ ಪಾಸಾದ ಅಭ್ಯರ್ಥಿಗಳು ಎರಡನೇ ಸುತ್ತಿನಲ್ಲಿ ಜಿಗ್ಜಾಗ್, ಪುಲ್ಅಪ್, ಉದ್ದ ಜಿಗಿತ ಪರೀಕ್ಷೆಗೆ ಹಾಜರರಾದರು. ಇನ್ನೂ ಎತ್ತರ, ಎದೆ ಸುತ್ತಳತೆ, ನೇತ್ರ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದವರು ರಾಯಚೂರು ರೈಲು ನಿಲ್ದಾಣದಲ್ಲಿ ರೈಲು ಮೂಲಕ ಸೇನಾ ಭರ್ತಿಗೆ ಆಗಮಿಸುತ್ತಿರುವ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.