ಸಿಂಧನೂರು (ರಾಯಚೂರು): ಹಣ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಕೃಷಿ ಇಲಾಖೆಯ ತಾಲ್ಲೂಕು ಸಹಾಯಕ ನಿರ್ದೇಶಕಿ ಪ್ರಿಯಾಂಕಾ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಈ ಹಿಂದೆ ದೇವದುರ್ಗ ತಾಲ್ಲೂಕಿನಲ್ಲಿ ಕೃಷಿ ಇಲಾಖೆ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ 19 ಬಿಲ್ಗಳಲ್ಲಿ ₹4.60 ಲಕ್ಷ ದುರ್ಬಳಕೆ ಮಾಡಿಕೊಂಡ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.
‘ಹಣ ದುರ್ಬಳಕೆ ಕುರಿತು ದೇವದುರ್ಗ ತಾಲ್ಲೂಕಿನ ಗೋಪಾಲಪುರದ ಖಾಸಿಂಸಾಬ ಅಂಜಳ ದೂರು ನೀಡಿದ್ದರು. ಈ ಕುರಿತು ಉಪಕೃಷಿ ನಿರ್ದೇಶಕರಿಂದ ತನಿಖೆ ಆಗಿತ್ತು. ಪ್ರಿಯಾಂಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಹಾಜರಾಗುವ ಪ್ರಮೇಯವೇ ಉದ್ಬವಿಸುವುದಿಲ್ಲ ಎಂದು ಪ್ರಿಯಾಂಕಾ ಪತ್ರ ಮುಖೇನ ತಿಳಿಸಿದ್ದರು.
ಈ ಕುರಿತು ತನಿಖಾಧಿಕಾರಿಗಳು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಕೃಷಿ ಇಲಾಖೆ ಆಯುಕ್ತ ಶರತ್ ಬಿ ಆದೇಶ ಹೊರಡಿಸಿದ್ದಾರೆ.
ಅವರು ಸಿಬ್ಬಂದಿ ಜತೆ ಸೌಜನ್ಯದಿಂದ ವರ್ತಿಸಿಲ್ಲ ಎಂಬ ದೂರುಗಳು ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ವಿಡಿಯೊ ಹರಿದಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.