ADVERTISEMENT

ಲಿಂಗಸುಗೂರು | ತಾಲ್ಲೂಕು ಆಸ್ಪತ್ರೆಯಲ್ಲಿ ಕುಡುಕರ ಹಾವಳಿ

ರಾತ್ರಿ ವೇಳೆ ಕಾರ್ಯನಿರ್ವಹಿಸುವ ಸಿಬ್ಬಂದಿ, ರೋಗಿಗಳ ಸಂಬಂಧಿಕರಿಗೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 5:36 IST
Last Updated 21 ಅಕ್ಟೋಬರ್ 2025, 5:36 IST
ಲಿಂಗಸುಗೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ
ಲಿಂಗಸುಗೂರು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ   

ಲಿಂಗಸುಗೂರು: ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಕುಡುಕರ ಹಾವಳಿಗೆ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ನಾನಾ ರೀತಿ ಕಿರಿಕಿರಿ ಅನುಭವಿಸುವಂತಾಗಿದೆ.

ಪಟ್ಟಣದ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗೆ ತಾಲ್ಲೂಕಿನ ಗ್ರಾಮೀಣ ಭಾಗ ಸೇರಿ ಅಕ್ಕಪಕ್ಕದ ತಾಲ್ಲೂಕಿನ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಒಳ ಮತ್ತು ಹೊರ ರೋಗಿಗಳ ಸಂಖ್ಯೆ ನಿತ್ಯವೂ ಹೆಚ್ಚಾಗಿರುತ್ತದೆ. ಇದಲ್ಲದೆ ಅಪಘಾತ ಹಾಗೂ ತುರ್ತು ಚಿಕಿತ್ಸೆಗಾಗಿ ತುರ್ತು ಚಿಕಿತ್ಸೆ ಘಟಕಕ್ಕೆ ಬರುವ ರೋಗಿಗಳ ಸಂಖ್ಯೆಯೂ ಅಧಿಕವಾಗಿರುತ್ತದೆ.

ರಾತ್ರಿ ಕುಡುಕರ ಹಾವಳಿ: ಕುಡುಕರು ರಾತ್ರಿ ವೇಳೆ ಕುಡಿದು ಬಂದು ತುರ್ತು ಚಿಕಿತ್ಸಾ ಘಟಕಕ್ಕೆ ನುಗ್ಗಿ ಅಲ್ಲಿನ ಸಿಬ್ಬಂದಿಗೆ ಅನಗತ್ಯವಾಗಿ ತೊಂದರೆ ನೀಡುತ್ತಾರೆ. ಇದರಿಂದ ಮಹಿಳಾ ಸಿಬ್ಬಂದಿ ರಾತ್ರಿ ವೇಳೆ ಡ್ಯೂಟಿ ಮಾಡಲು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ.

ADVERTISEMENT

ರಾತ್ರಿಯಾದರೆ ಸಾಕು ಕುಡುಕರು ಆಸ್ಪತ್ರೆಯನ್ನೇ ಮಲಗಲು ಮನೆ ಮಾಡಿಕೊಂಡಿದ್ದು, ನಿತ್ಯವೂ ಆಸ್ಪತ್ರೆಯ ಸಿಟಿ ಸ್ಕ್ಯಾನ್ ಸೆಂಟರ್ ಎದುರು ಮಲಗುತ್ತಾರೆ. ನಡೆದಾಡುವ ಮಾರ್ಗದಲ್ಲಿಯೇ ಮಲಗಿ ಒಳರೋಗಿಗಳ ಸಂಬಂಧಿಕರಿಗೆ ಕಿರಿಕಿರಿ ಉಂಟು ಮಾಡುತ್ತಾರೆ.

ಪ್ರಶ್ನಿಸಿದವರ ಮೇಲೆಯೇ ಜಗಳಕ್ಕೆ ಬರುತ್ತಾರೆ. ಆಸ್ಪತ್ರೆಯಿಂದ 50 ಮೀಟರ್ ಅಂತರದೊಳಗೆ ಎರಡು ಮದ್ಯದಂಗಡಿಗಳು ಇರುವುದರಿಂದ ಕುಡುಕರ ಹಾವಳಿ ಹೆಚ್ಚಾಗಿದೆ. ಸಾಕಷ್ಟು ಬಾರಿ ಸಣ್ಣಪುಟ್ಟ ಗಲಾಟೆಗಳೂ ನಡೆದಿವೆ.

ಭದ್ರತೆಯೇ ಇಲ್ಲ: ಹಗಲು ಹೊತ್ತಿನಲ್ಲಿ ಆಸ್ಪತ್ರೆಯ ಡಿ ದರ್ಜೆ ಸಿಬ್ಬಂದಿಯನ್ನೇ ಮುಖ್ಯಗೇಟ್ ಬಳಿ ಭದ್ರತೆಗೆ ನಿಯೋಜನೆ ಮಾಡಲಾಗುತ್ತಿದೆ. ಆದರೆ, ರಾತ್ರಿ ವೇಳೆ ಕುಡುಕರ ಹಾವಳಿಗೆ ಕಡಿವಾಣ ಹಾಕಲು ಕಾಯಂ ಭದ್ರತಾ ಸಿಬ್ಬಂದಿ ಇಲ್ಲ.

ಇದರಿಂದ ರಾತ್ರಿ ವೇಳೆ ಕುಡುಕರು ನಿರ್ಭಯವಾಗಿ ತಮ್ಮ ಉಪಟಳ ಮುಂದುವರಿಸಿದ್ದಾರೆ. ಸಂಜೆ 7 ರಿಂದ ಬೆಳಿಗ್ಗೆ 6 ರವರೆಗೆ ಆಸ್ಪತ್ರೆಗೆ ಬರುವ ಸಿಬ್ಬಂದಿ, ರೋಗಿಗಳಿಗೆ ಭದ್ರತೆಯ ಅಗತ್ಯವಿದೆ. ಪೊಲೀಸ್ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎನ್ನುವುದು ರೋಗಿಗಳ ಸಂಬಂಧಿಕರ ಆಗ್ರಹವಾಗಿದೆ.

ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ರಾತ್ರಿ ಕುಡುಕರ ಹಾವಳಿಯಿಂದ ಸಿಬ್ಬಂದಿ, ಮಹಿಳಾ ಸಿಬ್ಬಂದಿ, ರೋಗಿಗಳು ಹಾಗೂ ಅವರ ಸಂಬಂಧಿಕರು ನಾನಾ ರೀತಿಯ ತೊಂದರೆ ಅನುಭವಿಸುವಂತಾಗಿದೆ. ಇದಕ್ಕೆ ಕಡಿವಾಣ ಹಾಕಲು ಆಸ್ಪತ್ರೆಗೆ ಪೊಲೀಸ್ ಭದ್ರತೆ ಒದಗಿಸಲು ಜಿಲ್ಲಾ ಆರೋಗ್ಯಾಧಿಕಾರಿ ಮುಂದಾಗಬೇಕು ಎಂದು ಆನೆಹೊಸೂರು ಗ್ರಾಮದ ಭೀಮಸೇನ ಕುಲಕರ್ಣಿ ಒತ್ತಾಯಿಸುತ್ತಾರೆ.

ಆಸ್ಪತ್ರೆಗೆ ಭದ್ರತೆ ಒದಗಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಪತ್ರ ಬರೆಯಲಾಗಿದೆ
ಡಾ.ರುದ್ರಗೌಡ ಪಾಟೀಲ ಮುಖ್ಯ ಆಡಳಿತ ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.