ರಾಯಚೂರು: ‘ಆರ್ಯವೈಶ್ಯ ಸಮಾಜದ ಯಾವುದೇ ಸಮಸ್ಯೆಗಳಿದ್ದರೂ, ಅರ್ಧ ರಾತ್ರಿ ಮಾಹಿತಿ ಸಿಕ್ಕರೂ ಸ್ಪಂದಿಸುವೆ’ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ತಿಮ್ಮಾಪೂರು ಪೇಟೆಯ ಆರ್ಯವೈಶ್ಯ ಸಂಘದ ಗೀತಾ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಆರ್ಯವೈಶ್ಯ ಸಂಘದ ರಜತ ಮಹೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಯವೈಶ್ಯರು ಉತ್ತಮ ಸಂಘಟನೆಯನ್ನು ಕಟ್ಟಿಕೊಂಡು ಸುದೀರ್ಘ ಇಪ್ಪತ್ತೈದು ವರ್ಷಗಳ ಕಾಲ ದೇವನಪಲ್ಲಿ ಯಂಕಣ್ಣ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಸಂತಸದ ಸಂಗತಿ’ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಭಾರ ಮೇಯರ್ ಸಾಜೀದ್ ಸಮೀರ್ ಮಾತನಾಡಿ, ‘ಆರ್ಯವೈಶ್ಯರು ಕಿರಾಣಿ ಅಂಗಡಿಗಳ ಟ್ರೇಡ್ ಲೈಸೆನ್ಸ್ ಗಾಗಿ ಆತಂಕ ಪಡುವುದು ಬೇಡ. ಲೈಸೆನ್ಸ್ ಪಡೆಯುವ ವಿಧಾನವನ್ನು ಸರಳೀಕರಣಗೊಳಿಸಲಾಗುವುದು’ ಎಂದು ತಿಳಿಸಿದರು.
ಆರ್ಯವೈಶ್ಯ ಸಮಾಜದ ಅಧ್ಯಕ್ಷ ಸಾವಿತ್ರಿಪುರುಷೋತ್ತಮ ಮಾತನಾಡಿ, ‘ಹಿಂದೆ ದೇವಿನಗರದ ಪ್ರದೇಶದಲ್ಲಿ ಆರ್ಯವೈಶ್ಯರ ಕಿರಾಣಿ ಅಂಗಡಿಗಳ ಮೇಲೆ ದೌರ್ಜನ್ಯ ನಡೆದಾಗ ಪೋಲಿಸ್ ಇಲಾಖೆ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗಿತ್ತು. ಅದೇ ಸಂದರ್ಭದಲ್ಲಿ ನಗರ ವಿವಿಧ ಪ್ರದೇಶಗಳಲ್ಲಿ ವಾರ್ಡ್ ವಾರು ಸಂಘಗಳನ್ನು ರಚಿಸಿಕೊಳ್ಳಲಾಯಿತು. ಅದೇ ರೀತಿ ತಿಮ್ಮಾಪೂರು ಪೇಟೆಯಲ್ಲೂ ಆರ್ಯವೈಶ್ಯ ಸಂಘ ಮಾಡಲಾಯಿತು’ ಎಂದು ಹೇಳಿದರು.
ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ, ಆರ್ಯವೈಶ್ಯ ಸಮಾಜ ಮಾಜಿ ಅಧ್ಯಕ್ ಚಿತ್ರಾಲ ರಮೇಶ ಮಾತನಾಡಿದರು. ಸಿದ್ದನಗೌಡ ಪಾಟೀಲ, ಕೆ.ಶಾಂತಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಆರ್ಯವೈಶ್ಯ ಸಂಘದ ಅಧ್ಯಕ್ಷ ದೇವನಪಲ್ಲಿ ಯಂಕಣ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಬಿಜೆಪಿ ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಪಲುಗುಲ ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಘದ ಕಾರ್ಯದರ್ಶಿ ರಾಜೊಳ್ಳಿ ಹನುಮಂತಯ್ಯ, ಕೋಶಾಧ್ಯಕ್ಷ ನಂದಿನಿ ಹನುಮಂತಯ್ಯ ಉಪಸ್ಥಿತರಿದ್ದರು. ಕುರ್ಡಿ ಪದ್ಮಾವತಿ ಪ್ರಾರ್ಥಿಸಿದರು. ಕೆ.ಸಿ.ವೀರೇಶ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.