ADVERTISEMENT

ಅಂಬಾದೇವಿ ರಥೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 6:24 IST
Last Updated 7 ಜನವರಿ 2023, 6:24 IST
ಸಿಂಧನೂರು ತಾಲ್ಲೂಕಿನ ಸುಕ್ಷೇತ್ರ ಅಂಬಾಮಠದ ಸಿದ್ಧಪರ್ವತವಾಸಿ ಅಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಭಕ್ತಸಾಗರದ ಮಧ್ಯ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು
ಸಿಂಧನೂರು ತಾಲ್ಲೂಕಿನ ಸುಕ್ಷೇತ್ರ ಅಂಬಾಮಠದ ಸಿದ್ಧಪರ್ವತವಾಸಿ ಅಂಬಾದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಭಕ್ತಸಾಗರದ ಮಧ್ಯ ವಿಜೃಂಭಣೆಯಿಂದ ಮಹಾರಥೋತ್ಸವ ಜರುಗಿತು   

ಸಿಂಧನೂರು: ತಾಲ್ಲೂಕಿನ ಅಂಬಾ ಮಠದ ಸಿದ್ಧಪರ್ವತವಾಸಿ ಅಂಬಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಬನದ ಹುಣ್ಣಿಮೆಯ ದಿನ ಶುಕ್ರವಾರ ಸಂಜೆ ಭಕ್ತಸಾಗರದ ಮಧ್ಯ ವಿಜೃಂಭಣೆ ಯಿಂದ ಮಹಾರಥೋತ್ಸವ ಜರುಗಿತು.

ದೇವಿ ಮೂರ್ತಿಗೆ ಕುಂಕುಮಾರ್ಚನೆ, ಬಿಲ್ವಾರ್ಚನೆ, ರುದ್ರಾಭಿಷೇಕ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ನಂತರ ತಹಶೀಲ್ದಾರ್ ಅರುಣ ಎಚ್.ದೇಸಾಯಿ ಹಾಗೂ ನಗರಸಭೆಯ ಮಂಜುನಾಥ ಗುಂಡೂರು ಅವರು ಶ್ರದ್ಧಾಭಕ್ತಿಯಿಂದ ಪಲ್ಲಕ್ಕಿ ಉತ್ಸವ ನಡೆಸಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬಂದು ಸರದಿ ಸಾಲಿನಲ್ಲಿ ನಿಂತು ಬಗಳಾಮುಖಿ ದೇವಿಯ ದರ್ಶನ ಪಡೆದು ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸಿದರು. ದರ್ಶನಕ್ಕೆ ತೆರಳುವವರಿಗೆ ಮಾಸ್ಕ್ ಧರಿಸುವುದು ಕಡ್ಡಾಯವಾಗಿತ್ತು.

ಸಂಜೆ 5 ಗಂಟೆಗೆ ದೇವಸ್ಥಾನದ ಅರ್ಚಕರು ಅಂಬಾದೇವಿ ಉತ್ಸವ ಮೂರ್ತಿಯೊಂದಿಗೆ ಬಂದು ರಥದ ಕಳಸಕ್ಕೆ ಪೂಜೆ ಸಲ್ಲಿಸಿದರು. ನಂತರ ರಥೋತ್ಸವಕ್ಕೆ ಶಾಸಕ ವೆಂಕಟರಾವ್ ನಾಡಗೌಡ ಹಾಗೂ ತಹಶೀಲ್ದಾರ್ ಅರುಣ ಎಚ್.ದೇಸಾಯಿ ಚಾಲನೆ ನೀಡಿದರು. ತದನಂತರ ಉತ್ಸವ ಮೂರ್ತಿಯನ್ನು ಹೊತ್ತಿದ್ದ ರಥೋತ್ಸವ ಪಾದಕಟ್ಟೆಯವರೆಗೆ ಸಾಗಿತು. ಅಂಬಾದೇವಿಗೆ ಉಘೆ.. ಉಘೆ.. ಎಂದು ಜಯಘೋಷ ಹಾಕುತ್ತಾ ಹೂ, ಉತ್ತುತ್ತಿ, ಬಾಳೆಹಣ್ಣನ್ನು ರಥೋತ್ಸವಕ್ಕೆ ಎಸೆದು ಭಕ್ತರು ಭಕ್ತಿ ಅರ್ಪಿಸಿದರು.

ADVERTISEMENT

ಅಂಬಾದೇವಿಯ ಮೂರ್ತಿ ಮತ್ತು ರಥೋತ್ಸವದ ದರ್ಶನ ಪಡೆದು ಭಕ್ತರು ಜೈಕಾರ ಹಾಕಿದರು. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.

ಬ್ಲಾಕ್ ಕಾಂಗ್ರೆಸ್ ಗ್ರಾಮೀಣ
ಘಟಕದ ಅಧ್ಯಕ್ಷ ಪಂಪನಗೌಡ ಬಾದರ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ, ಅಂಬಾಮಠದ ದೇವಸ್ಥಾನ ಸಮಿತಿಯ ಅಧ್ಯಕ್ಷ ರಾಜಶೇಖರ ಹಿರೇಮಠ, ಕಾರ್ಯದರ್ಶಿ ಹನುಮೇಶಾಚಾರ್ ಸೇರಿದಂತೆ ಸ್ವಾಮೀಜಿಗಳು, ದೇವಸ್ಥಾನ ಸಮಿತಿಯ ಸದಸ್ಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.