ADVERTISEMENT

ಮೂಢನಂಬಿಕೆ ಹೋಗಲಾಡಿಸಲು ಶ್ರಮಿಸಿದ ಅಂಬಿಗರ ಚೌಡಯ್ಯ

ಗಂಗಾಮಾತಸ್ಥ ಸಮಾಜದ ಜಿಲ್ಲಾ ಘಟಕದ ಧ್ಯಕ್ಷ ಕೆ.ಶಾಂತಪ್ಪ ಭಾಷಣ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 12:30 IST
Last Updated 21 ಜನವರಿ 2020, 12:30 IST
ರಾಯಚೂರಿನ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿದರು
ರಾಯಚೂರಿನ ರಂಗಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಿಜ ಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಗಂಗಾಮತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ಮಾತನಾಡಿದರು   

ರಾಯಚೂರು: ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಗಂಗಾಮಾತಸ್ಥ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಶಾಂತಪ್ಪ ಅಭಿಪ್ರಾಯಪಟ್ಟರು.

ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಖೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಯಾರಿಗೂ ಹೆದರದೆ, ಅಳುಕದೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು. ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಃಖದಲ್ಲಿದ್ದವರಿಗೆ ಸಾಂತ್ವಾನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ಎಂದು ಬಣ್ಣಿಸಿದರು.

ADVERTISEMENT

ಜಾತಿ ಅಭಿಮಾನ ಇರಲಿ, ದುರಾಭಿಮಾನ ಬೇಡ, ಇಂತಹ ಮಹಾತ್ಮರ ಜಯಂತಿಯನ್ನು ಜಾತಿ ಆಧಾರದಲ್ಲಿ ತಾರತಮ್ಯಮಾಡದೇ ಎಲ್ಲಾ ವರ್ಗದವರು ಒಗ್ಗೂಡಿ ಆಚರಿಸಬೇಕು ಎಂದರು.

ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಅಂಬಿಗರ ಚೌಡಯ್ಯನವರು ಕೇವಲ ಗಂಗಾಮತ ಸಮಾಜಕ್ಕೆ ಸೀಮಿತರಾದವರಲ್ಲ. ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ. ಇಂಥವರ ವಿಚಾರಧಾರೆಗಳನ್ನು ಯುವಕರಿಗೆ ಮುಟ್ಟಿಸುವ ಕಾರ್ಯ ಸರ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾಜದ ಏಳಿಗೆಗೆ ಶಿಕ್ಷಣ ಅಗತ್ಯ. ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗಬಾರದು. ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಯುವ ಪೀಳಿಗೆ ಮೊಬೈಲ್ ಬಳಕೆಯಿಂದ ದೂರ ಇರುವಂತೆ ಸಲಹೆ ನೀಡಿದರು.

ಹಿಂದಿನ ಕಾಲದಲ್ಲಿ ನದಿಯ ದಡವನ್ನು ದಾಟಲು ಯಾವುದೇ ಸೌಕರ್ಯಗಳಿರಲಿಲ್ಲ. ಅಂತಹ ಸಂದರ್ಭದಲ್ಲಿ ನದಿಯ ದಡವನ್ನು ಸೇರಿಸುತ್ತಿದ್ದರು. ಅಂಬಿಗರು ನಂಬಿದವರ ಕೈಬಿಡುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಶರಣರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿಗೆ ಗೌರವ ಸಲ್ಲಿಸಿದಂತಾಗುತ್ತದೆ. 800 ವರ್ಷಗಳ ಹಿಂದೆ, 12ನೇ ಶತಮಾನದಲ್ಲಿ ಸಮಾನತೆಯ ತತ್ವವನ್ನು ಜಗತ್ತಿಗೆ ಸಾರಿದವರು.‌

ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ನಿರ್ದೇಶಕಿ ಮಂಗಳಾ ನಾಯಕ, ಗಂಗಾಮಾತಸ್ಥ ಸಮುದಾಯದ ಮುಖಂಡರಾದ ಕೆ. ಆಂಜನೇಯ, ಬಸ್ಸಪ್ಪ ರಾಂಪೂರು, ಹರೀಶ್ ನಾಡಗೌಡ, ಕೆ.ಲಕ್ಷ್ಮಣ, ಕೆ.ಶರಣಪ್ಪ, ಜಿ.ಶಿವಮೂರ್ತಿ, ನಗರ ಸಭೆ ಮಾಜಿ ಸದಸ್ಯ ಎನ್.ಶ್ರೀನಿವಾಸರೆಡ್ಡಿ, ಮಲ್ಲಿಕಾರ್ಜುನ, ರಾಜೇಶ್ವರಿ ಇದ್ದರು.

ಮೆರವಣಿಗೆ: ಅಂಬಿಗರ ಚೌಡಯ್ಯ ವೃತ್ತದಿಂದ ರಂಗಮಂದಿರದವರೆಗೆ ನಿಜ ಶರಣ ಅಂಬಿಗರ ಚೌಡಯ್ಯ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.