ರಾಯಚೂರು: ‘ಕಲೆಗಳು ಭಾವನೆಗಳ ಒಂದು ಭಾಗವಾಗಿದೆ. ಇತಿಹಾಸವನ್ನು ನೆನಪಿಟ್ಟುಕೊಳ್ಳಲು ಚಿತ್ರಕಲೆಯು ಆಧಾರವಾಗಿದೆ‘ ಎಂದು ಜಿಲ್ಲಾ ಖಜಾನೆ ಇಲಾಖೆಯ ಸಹ ನಿರ್ದೇಶಕ ಕೃಷ್ಣ ಶಾವಂತಗೇರಾ ಹೇಳಿದರು.
ವಿಶ್ವ ದೃಶ್ಯಕಲಾ ದಿನಾಚರಣೆ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಕಲಾವಿದರ ಕಲಾಕೃತಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದಿನ ಕಾಲಘಟ್ಟದಲ್ಲಿ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ಚಿತ್ರಕಲೆ ನಶಿಸಿ ಹೋಗುತ್ತಿದೆ. ಕಲೆಯನ್ನು ಉಳಿಸಿ ಬೆಳೆಸಬೇಕಿದೆ. ಯಾಂತ್ರಿಕ ಯುಗದಲ್ಲಿ ಚಿತ್ರಕಲೆ ನಶಿಸಿ ಹೋಗುತ್ತಿದೆ. ಯುವ ಪೀಳಿಗೆ ಕಲೆಯನ್ನು ವೃತ್ತಿಯಾಗಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಆಧುನಿಕ ಭರಾಟೆಯಲ್ಲಿ ಹಾಗೂ ಜಾಗತೀಕರಣದ ನಾಗರೀಕತೆಯಲ್ಲಿ ಯಾಂತ್ರಿಕೃತವಾಗಿ ಬದುಕು ಸಾಗುತ್ತಿದೆ. ದೇಶದಲ್ಲಿ ವಿವಿಧ ಸಂಸ್ಕೃತಿಗಳು, ವಿಭಿನ್ನತೆಯನ್ನು ಕಾಣುತ್ತಿದ್ದೇವೆ. ಬದುಕನ್ನುಚಿತ್ರಕಲೆಯು ಗಟ್ಟಿಗೊಳಿಸಿ ಸಾತ್ವಿಕ ಬುನಾದಿ ಹೊಂದಿದೆ ಎಂದು ಅವರು ಹೇಳಿದರು.
ಕಲೆಯನ್ನು ಕಲೆಗಾಗಿ ರೂಢಿಸಿ ಕೊಳ್ಳದೆ ಬದುಕಿಗಾಗಿ ರೂಢಿಸಿಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲೆಯ ಕಲಾವಿದರು ರಚಿಸಿದ ಚಿತ್ರ ಕಲಾಕೃತಿಗಳ ಪ್ರದರ್ಶನ ನಡೆಯಿತು.
ಚಿತ್ರ ಕಲಾವಿದ ಚಾಂದ್ ಪಾಷಾ, ನೂತನ ಲಲಿತಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಆರ್.ಮಾಳಿ, ಎಚ್.ಎಚ್.ಮ್ಯಾದರ್, ಈಶ್ವರ, ದೇವೇಂದ್ರ ಹುಡಾ, ದಿ.ಆರ್ಟ್ ಇಂಟಿಗ್ರೇಶನ್ ಚಿತ್ರಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ.ಅಶೋಕ ಶಟಕಾರ, ಚಿತ್ರಕಲಾ ಶಿಕ್ಷಕರ ಮತ್ತು ನಿರ್ದೇಶಕ ಕೆ.ಎಸ್.ಡಿ.ಎ ಮಲ್ಲಿಕಾರ್ಜುನ ವಿ. ಸಾಜೀದ್ ಹಾಗೂ ಕಲಾವಿದರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.