ADVERTISEMENT

ರಾಯಚೂರು: ಸಂಭ್ರಮದಿಂದ ನೆರವೇರಿದ ಆಯುಧಪೂಜೆ

ವಿಜಯದಶಮಿಯಂದು ನಾಡದೇವಿಯ ವಿಶೇಷ ಆರಾಧನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2020, 14:10 IST
Last Updated 26 ಅಕ್ಟೋಬರ್ 2020, 14:10 IST
ರಾಯಚೂರಿನ ಬಾಲಮಾರೆಮ್ಮ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ವಿಶೇಷ ಹೋಮ ನೆರವೇರಿಸಲಾಯಿತು
ರಾಯಚೂರಿನ ಬಾಲಮಾರೆಮ್ಮ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ವಿಶೇಷ ಹೋಮ ನೆರವೇರಿಸಲಾಯಿತು   

ರಾಯಚೂರು: ನವರಾತ್ರಿ ಹಬ್ಬದ ನಿಮಿತ್ತ ಜಿಲ್ಲೆಯಾದ್ಯಂತ ಅಯುಧಪೂಜೆಯು ಸಂಭ್ರಮ, ಸಡಗರದೊಂದಿಗೆ ಭಾನುವಾರ ನೆರವೇರಿಸಲಾಯಿತು.

ಕೊರೊನಾ ಸೋಂಕು ಹರಡುವ ಆತಂಕದಿಂದಾಗಿ ಪರಸ್ಪರ ಅಂತರ ಕಾಯ್ದುಕೊಂಡು ಪೂಜೆ, ಪುನಸ್ಕಾರಗಳಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡುಬಂತು. ಮುಖ್ಯವಾಗಿ ಮಕ್ಕಳು ಹಾಗೂ ಹಿರಿಯ ವಯಸ್ಸಿನವರು ಮಾಸ್ಕ್‌ ಧರಿಸಿಯೇ ದೇವಸ್ಥಾನಗಳಿಗೆ ಭೇಟಿನೀಡಿದರು. ಸಂಕಷ್ಟವನ್ನು ಸಂಹಾರ ಮಾಡುವಂತೆ ದೇವಿಯನ್ನು ಭಕ್ತಿಯಿಂದ ನಮಿಸುವುದು ಸಾಮಾನ್ಯವಾಗಿತ್ತು, ಬೈಕ್‌, ಕಾರು, ಆಟೋ ಸೇರಿದಂತೆ ಜನರು ಪ್ರತಿನಿತ್ಯ ಬಳಕೆ ಮಾಡುವ ವಾಹನಗಳನ್ನು ಸ್ವಚ್ಛಗೊಳಿಸಿ ಪೂಜೆ ಸಲ್ಲಿಸುತ್ತಿದ್ದ ಸಂಪ್ರದಾಯ ಸಾಮಾನ್ಯವಾಗಿತ್ತು. ಹೊಸದಾಗಿ ವಾಹನಗಳನ್ನು ಖರೀದಿಸಿ ದೇವಸ್ಥಾನಗಳ ಎದುರು ವಿಶೇಷ ಪೂಜೆ ಸಲ್ಲಿಸುವುದು ಕಂಡುಬಂತು.

ರಾಯಚೂರು ನಗರದ ವಿವಿಧೆಡೆ ಸಾರ್ವಜನಿಕವಾಗಿ ಅಂಭಾಭವಾನಿ ದೇವಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಇದಲ್ಲದೆ ಅಂಬಾಭವಾನಿ ದೇವಸ್ಥಾನ, ಮಾರೆಮ್ಮ ದೇವಸ್ಥಾನಗಳು, ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನಗಳಲ್ಲಿ ನವರಾತ್ರಿಯುದ್ದಕ್ಕೂ ವಿಶೇಷ ಪೂಜೆ ನೆರವೇರಿಸಲಾಯಿತು. ಹಬ್ಬದ ಕೊನೆಯ ದಿನ ಸೋಮವಾರ ವಿಜಯದಶಮಿಯಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕೆಲವು ಕಡೆ ಅನ್ನಪ್ರಸಾದ ವ್ಯವಸ್ಥೆ ಮಾಡಿದ್ದರು.

ADVERTISEMENT

ನಾಡದೇವಿ ಆರಾಧನೆ ಅಂಗವಾಗಿ ಹೋಂ, ಹವನಗಳು ನಡೆದವು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಅಯುಧ ಪೂಜೆ ನಿಮಿತ್ತ ಶಸ್ತ್ರಾಸ್ತ್ರಗಳು ಮತ್ತು ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು. ಪ್ರತಿವರ್ಷ ರಾಯಚೂರು ನಗರಸಭೆಯಿಂದ ಆಯೋಜಿಸಲಾಗುತ್ತಿದ್ದ ನಾಡದೇವಿಯ ಆರಾಧನೆಯನ್ನು ಈ ವರ್ಷ ರದ್ದುಗೊಳಿಸಲಾಗಿತ್ತು. ಕಚೇರಿಯಲ್ಲಿಯೇ ನಾಡದೇವಿಗೆ ಪೂಜೆ ಸಲ್ಲಿಸುತ್ತಿರುವುದಾಗಿ ಪೌರಾಯುಕ್ತ ಡಾ.ದೇವಾನಂದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.