ರಾಯಚೂರು: ದುಶ್ಚಟಗಳಿಂದ ದೂರವಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಮಹಾನಗರಗಳಿಗೆ ಹೋದಾಗ ದುಶ್ಚಟಗಳಿಗೆ ಬಲಿಯಾಗಬಾರದು ಎಂದು ಭಂಡಾರಿ ಆಸ್ಪತ್ರೆಯ ಅಧ್ಯಕ್ಷ ಸೌಭಾಗ್ಯರಾಜ ಭಂಡಾರಿ ಹೇಳಿದರು.
ನಗರದ ಎಂ.ಕೆ.ಭಂಡಾರಿ ಫಿನ್ಯಾಕಲ್ ಕೇಂದ್ರದಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ನಿಮಿತ್ತ ಸೋಮವಾರ ಆಯೋಜಿಸಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು.
ಧೂಮಪಾನ, ಮದ್ಯಪಾನ ಹಾಗೂ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆಗಳು ಇರುವುದರಿಂದ, ದುಶ್ಚಟಗಳಿಂದ ದೂರವಿರಬೇಕು.ವಿಶೇಷವಾಗಿ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ದೊಡ್ಡ ದೊಡ್ಡ ನಗರಕ್ಕೆ ಹೋದಾಗ ಯಾವುದೇ ಇಂತಹ ದುಷ್ಚಟಗಳಿಗೆ ಬಲಿಯಾಗಬಾರದು. ವಿದ್ಯಾಭ್ಯಾಸದ ಕಡೆ ಗಮನಕೊಟ್ಟು ಓದಿದಾಗ ಮಾತ್ರ ತಂದೆ ತಾಯಿಗಳ ನಿರೀಕ್ಷೆಗಳನ್ನು ಈಡೇರಿಸುವುದಕ್ಕೆ ಸಾಧ್ಯವಾಗುತ್ತದೆ ಎಂಬುದನ್ನು ನೆನಪಿಡಬೇಕು ಎಂದು ಹೇಳಿದರು.
ರಾಯಚೂರಿನಲ್ಲಿ ಕ್ಯಾನ್ಸರ್ ಕೇಂದ್ರ ಸ್ಥಾಪನೆಗೆ ಹಲವು ವರ್ಷಗಳ ಪ್ರಯತ್ನ ಮಾಡಲಾಗಿದ್ದು, ಈಗ ಅದು ಈಡೇರಿದೆ. ಕ್ಯಾನ್ಸರ್ ಇದ್ದವರು ಹೆದರಿಕೆ ಇಲ್ಲದೇ ಚಿಕಿತ್ಸೆ ಪಡೆದು ಜೀವನ ಸಾಗಿಸಬೇಕು ಎಂದು ತಿಳಿಸಿದರು.
ಕ್ಯಾನ್ಸರ್ ತಜ್ಞ ಡಾ.ರಾಘವೇಂದ್ರ ಸಾಗರ ಮಾತನಾಡಿ, ಕ್ಯಾನ್ಸರ್ಗೆ ಭಯ ಪಡುವ ಅವಶ್ಯಕತೆ ಇಲ್ಲ. ಯಾವುದೇ ಭಯವಿಲ್ಲದೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಡಾ.ರಾಜಶೇಖರ ನಾಯಕ ಮಾತನಾಡಿ, ಕ್ಯಾನ್ಸರ್ ಇತ್ತೀಚಿಗೆ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ದುಶ್ಚಟಗಳು ಸೇರಿದಂತೆ ವಾಯುಮಾಲಿನ್ಯವೂ ಕಾರಣವಾಗಿದ್ದು, ಆದಷ್ಟು ದುಶ್ಚಟಗಳಿಂದ ದೂರ ಉಳಿಯಬೇಕು ಎಂದು ಹೇಳಿದರು.
ಆಡಳಿತ ಅಧಿಕಾರಿ ಡಾ.ರಿಯಾಜುದ್ದೀನ್ ಮಾತನಾಡಿ, ಕ್ಯಾನ್ಸರ್ ರೋಗದ ಅರಿವು ಮೂಡಿಸುವ ಸಲುವಾಗಿ ಈ ತಿಂಗಳಲ್ಲಿ ಎರಡನೇ ಬಾರಿಗೆ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಂಡಾರಿ ಆಸ್ಪತ್ರೆ ವೈದ್ಯಕೀಯ ನಿರೀಕ್ಷಕ ಡಾ.ಸಿ.ಎನ್.ಕುಲಕರ್ಣಿ, ಅಜಯ ಭಂಡಾರಿ, ಡಾ.ಮೋಹನ್ ರಾವ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.