ADVERTISEMENT

ಟಿಕೆಟ್ ಕೊಡದಿದ್ದರೆ ದಿಟ್ಟ ನಿರ್ಧಾರ: ಎಚ್ಚರಿಕೆ

ಬಿ.ವಿ. ನಾಯಕ ಬೆಂಬಲಿಗರಿಂದ ‘ಗೋಬ್ಯಾಕ್ ಅಮರೇಶ್ವರ ನಾಯಕ’ ಘೋಷಣೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 16:28 IST
Last Updated 27 ಮಾರ್ಚ್ 2024, 16:28 IST
ರಾಯಚೂರಿನಲ್ಲಿ ಬುಧವಾರ ನಡೆದ ಬಿ.ವಿ. ನಾಯಕರ ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆಯಲ್ಲಿ ಬೆಂಬಲಿಗರು ಸಂಸದ ಅಮರೇಶ್ವರ ನಾಯಕ ಅವರಿಗೆ ಗೋಬ್ಯಾಕ್ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು
ರಾಯಚೂರಿನಲ್ಲಿ ಬುಧವಾರ ನಡೆದ ಬಿ.ವಿ. ನಾಯಕರ ಬೆಂಬಲಿಗರು ಹಾಗೂ ಅಭಿಮಾನಿಗಳ ಸಭೆಯಲ್ಲಿ ಬೆಂಬಲಿಗರು ಸಂಸದ ಅಮರೇಶ್ವರ ನಾಯಕ ಅವರಿಗೆ ಗೋಬ್ಯಾಕ್ ಘೋಷಣೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು   

ರಾಯಚೂರು: ‘ಬಿಜೆಪಿ ವರಿಷ್ಠರು ಪುನರ್ ಮರುಪರಿಶೀಲಿಸಿ ಟಿಕೆಟ್ ನೀಡಬೇಕು. ಇಲ್ಲದೇ ಇದ್ದರೆ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಲಿದೆ’ ಎಂದು ಮಾಜಿ ಸಂಸದ ಬಿ.ವಿ ನಾಯಕ ಎಚ್ಚರಿಸಿದರು.

ಮಾಜಿ ಸಂಸದ ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ವಿ ನಾಯಕ ಅವರಿಗೆ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ನಡೆದ ಬೆಂಬಲಿಗರ ಹಾಗೂ ಅಭಿಮಾನಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ನಮ್ಮ ಕುಟುಂಬದ ಇತಿಹಾಸದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಪಕ್ಷ ಸೇರಿದೆ. ಲೋಕಸಭಾ ಕ್ಷೇತ್ರದ ಪಕ್ಷದ ಟಿಕೆಟ್ ನೀಡುವ ಭರವಸೆ ನೀಡಿ ಪ್ರಚಾರ ಆರಂಭಸುವಂತೆ ಮುಖಂಡರು ಸೂಚಿಸಿದ್ದರು. ಆದರೆ, ಟಿಕೆಟ್ ನೀಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮೂರನೇ ಸ್ಥಾನದಲ್ಲಿ ಇತ್ತು. ನಾನು ಅಲ್ಪ ಮತಗಳಿಂದ ಸೋಲು ಅನುಭವಿಸಿದರೂ ಪಕ್ಷದ ಸಂಘಟನೆ ಬಲಗೊಂಡಿತು. ವಾಸ್ತವದಲ್ಲಿ ಲೋಕಸಭೆಗೆ ಸ್ಪರ್ಧಿಸುವ ಕಲ್ಪನೆಯನ್ನೂ ಮಾಡಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ವಿರೋಧ ಪಕ್ಷ ನಾಯಕ ಆರ್.ಅಶೋಕ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟಿಕೆಟ್ ಭರವಸೆ ನೀಡಿದರು. ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕರಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ನಿಮಗೆ ಟಿಕೆಟ್ ನೀಡಲಾಗುವುದು. ವಿಶ್ವಾಸ ಮೂಡಿಸಿದರು‘ ಎಂದರು.

‘ಹಾಲಿ ಸಂಸದರು ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಮುಖಂಡರು ಪಕ್ಷದ ಕಾರ್ಯಕರ್ತರ ಪರಿಸ್ಥಿತಿಯನ್ನೂ ಅರ್ಥೈಸಿಕೊಳ್ಳಬೇಕು. ಕಾರ್ಯಕರ್ತರನ್ನೇ ಕಡೆಗಣಿಸಿದರೆ ಫಲಿತಾಂಶದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ’ ಎಂದು ಹೇಳಿದರು.

ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್ ಮಾತನಾಡಿ,‘ ಬಿಜೆಪಿ ಟಿಕೆಟ್ ಬದಲಾವಣೆ ಮಾಡಿ ಬಿ.ವಿ ನಾಯಕ ಅವರಿಗೆ ನೀಡಬೇಕು. ಇಲ್ಲದೇ ಇದ್ದರೆ ಕೆಟ್ಟ ಪರಿಣಾಮ ಪಕ್ಷ ಎದುರಿಸುಬೇಕಾಗುತ್ತದೆ ಎಂಬುವುದನ್ನು ಪಕ್ಷದ ರಾಜ್ಯ ನಾಯಕರು ಅರಿತುಕೊಳ್ಳಬೇಕು’ ಎಂದು ಎಚ್ಚರಿಸಿದರು.

ಮುಖಂಡರಾದ ಮಲ್ಲಿಕಾರ್ಜುನ ಜಕ್ಕಲದಿನ್ನಿ, ತಿಮ್ಮಾರೆಡ್ಡಿ ಬೋಗಾವತಿ, ಜಂಬಣ್ಣ, ಅನಿತಾ ಬಸವರಾಜ, ಶರಣಬಸವ ಜೋಳದಡಗಿ,ಅನಿಲ್ ಕುಮಾರ, ಗುರು ಉಪಸ್ಥಿತರಿದ್ದರು.

ಸಭೆಯಲ್ಲಿ ಯುವಕರಿಬ್ಬರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದರು. ಕಾರ್ಯಕರ್ತರು ಅವರನ್ನು ತಡೆದು ಸಮಾಧಾನ ಪಡಿಸಿದರು. ನಂತರ ‘ಗೋಬ್ಯಾಕ್ ಅಮರೇಶ್ವರ ನಾಯಕ’ ಎಂದು ಘೋಷಣೆ ಕೂಗಿದರು. ಬ್ಯಾನರ್‌ಗಳನ್ನು ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.