ರಾಯಚೂರು: ಪ್ರಸ್ತುತ ಕಾಲದಲ್ಲಿ ಆಧುನಿಕತೆ ಜೊತೆಗೆ ವಿಜ್ಞಾನ, ಯಾಂತ್ರಿಕತೆ, ತಾಂತ್ರಿಕತೆಯು ಯುವಕರನ್ನು ಆಕರ್ಷಿಸುತ್ತಿದೆ. ಹೀಗಿದ್ದರೂ ಜಿಲ್ಲೆಯ ಯುವಕ-ಯುವತಿಯರು ಸಾಹಿತ್ಯ ಕ್ಷೇತ್ರಕ್ಕೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಸಾಹಿತಿ ವೀರಹನುಮಾನ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಂಗಳವಾರ ಏರ್ಪಡಿಸಿದ್ದ ಕವಯಿತ್ರಿ ಪ್ರಿಯಾಂಕ ಅವರು ಬರೆದ ಚೊಚ್ಚಲ ಕೃತಿ ‘ಧರೆಗಿಳಿದು ಬಾ ಮಳೆಯೆ’ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಕವಯಿತ್ರಿ ಪ್ರಿಯಾಂಕ ಅವರ ಕವನ ಸಂಕಲನದಲ್ಲಿ, ಕಾವ್ಯದ ವಿಷಯ ವಸ್ತುವಿನೊಂದಿಗೆ, ಮೌಲಿಕ ಶಬ್ದಗಳು, ಕಾವ್ಯ ನಿರೂಪಣೆ ಎದ್ದುಕಾಣುತ್ತದೆ’ ಎಂದರು.
ಕೃತಿ ಲೋಕಾರ್ಪಣೆ ಮಾಡಿದ ಪ್ರಾಧ್ಯಾಪಕಿ ಶೀಲಾದಾಸ ಅವರು ಮಾತನಾಡಿ, ಧರೆಗಿಳಿದು ಬಾ ಮಳೆಯೆ ಕೃತಿಯಲ್ಲಿ ಧರೆ ಮತ್ತು ಮಳೆ ಬದುಕಿನ ಹತ್ತಿರವಾದ ಪದಗಳು. ಮಳೆಯ ಬಗ್ಗೆ ಹಿರಿಯ ಸಾಹಿತಿಗಳಿಂದ ಹಿಡಿದು, ಕಿರಿಯ ಸಾಹಿತಿಗಳು ಕಾವ್ಯ ರಚಿಸಿದ್ದಾರೆ. ಮಳೆಯು ಕಾವ್ಯಕ್ಕೆ ಪ್ರೀತಿಯ ವಸ್ತು. ಕಾವ್ಯಗಳಲ್ಲಿ ಬದುಕಿನ ಚಿತ್ರಣಗಳು ಎದ್ದುಕಾಣುತ್ತವೆ. ಹಾಗೆಯೇ ವಿದ್ಯಾರ್ಥಿ ಪ್ರಿಯಾಂಕ ಅವರ ಕಾವ್ಯರಚನೆ, ಆಶಾಭಾವನೆ ಮೂಡಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಉಪನ್ಯಾಸಕಿ ರೇಖಾ ಪಾಟೀಲ ಕೃತಿ ಪರಿಚಯ ಮಾಡುತ್ತಾ, ಈ ಕವನ ಸಂಕಲನದಲ್ಲಿ ಎಲ್ಲಾ ಕವನಗಳು ಭಿನ್ನ,ಭಿನ್ನ ವಿಷಯವಸ್ತುವನ್ನು ಒಳಗೊಂಡಿವೆ. ಕಾವ್ಯ ರಚನೆಗೆ ಬೇಕಾದ ವಿಷಯ ವಸ್ತುವನ್ನು ವಿದ್ಯಾರ್ಥಿನಿ ಪ್ರಿಯಾಂಕ ನ್ಯಾಯ ನೀಡಿದ್ದಾರೆ ಎಂದರು.
ಕವಯಿತ್ರಿ ಪ್ರಿಯಾಂಕ ಮಾತನಾಡಿದರು. ಸುರಭಿ ಸಾಂಸ್ಕೃತಿಕ ಬಳಗದ ಅಧ್ಯಕ್ಷ ಜಿ. ಸುರೇಶ್, ಸಾಹಿತಿ ದಸ್ತಗೀರ್ ಸಾಬ್ ದಿನ್ನಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಭೀಮನಗೌಡ ಇಟಗಿ, ಜೆ ಎಲ್ ಈರಣ್ಣ ಹಾಗೂ ಪ್ರಾಧ್ಯಾಪಕ ವೆಂಕಟೇಶ್ ಇದ್ದರು. ಶಿಕ್ಷಕಿ ಯಶೋಧಾ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.