ಸಿರವಾರ: ತುಂಗಭದ್ರಾ ಎಡದಂಡೆ ನಾಲೆಯ ಕೆಳಭಾಗದ ಡಿಸ್ಟ್ರಿಬ್ಯೂಟರ್ 85 ರಿಂದ 92 ರವರೆಗಿನ ಕಾಲುವೆಗಳಿಗೆ ಸಮರ್ಪಕ ನೀರು ಹರಿಸಲು ಹತ್ತು ಹಲವು ಬಾರಿ ಹೋರಾಟ ಮಾಡಿದರೂ ಇವತ್ತಿಗೂ ಮುಖ್ಯ ಕಾಲುವೆಗೆ 6 ಅಡಿ ಇರಬೇಕಾದ ನೀರು 2 ಅಡಿಗಿಂತ ಹೆಚ್ಚು ಹರಿಸಿಲ್ಲ. ಇದೇ ರೀತಿ ನೀರಿನ ಹರಿವು ಮುಂದುವರಿದರೆ ಮಂಗಳವಾರ ಪಕ್ಷಾತೀತವಾಗಿ ರೈತರೊಂದಿಗೆ ರಸ್ತೆಗಿಳಿದು ಹೋರಾಟ ಮಾಡಲಾಗುವುದು ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಅವರು ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕಳೆದ ತಿಂಗಳು ನಡೆದ ಹೋರಾಟದ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮುಖ್ಯ ಕಾಲುವೆಗಳ ಮೇಲೆ ಸೂಕ್ತ ಪೊಲೀಸ್ ಬಂದ್ ಒದಗಿಸಿ, ನಾಕಾ ಬಂದಿ ಹಾಕಿ, ಹಗಲು ರಾತ್ರಿ ಗಸ್ತು ತಿರುಗಿ ನೀರೊದಗಿಸುವ ಭರವಸೆಯನ್ನು ನೀಡಿದ್ದಕ್ಕಾಗಿ ಧರಣಿ ಹಿಂಪಡೆಯಲಾಯಿತು’ ಎಂದರು.
ಆದರೆ ಇಂದಿನವರೆಗೂ ಸತತವಾಗಿ ಸಮಪ್ರಮಾಣದ ಗೇಜ್ ನೀರು ಕೆಳಭಾಗದ ರೈತರಿಗೆ ಸಿಗುತ್ತಿಲ್ಲ. ನೀರಿನ ಗೇಜ್ ಅನ್ನು ಕಾಪಾಡುವಲ್ಲಿ ನೀರಾವರಿ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಮಾಜಿ ಶಾಸಕ ಬಿಜೆಪಿ ಮುಖಂಡ ಗಂಗಾಧರ ನಾಯಕ,‘ಅಧಿಕಾರಿಗಳು ಪ್ರತಿ ಬಾರಿಯೂ ರೈತರೊಂದಿಗೆ ಚೆಲ್ಲಾಟವಾಡುತ್ತಿದ್ದು, ಈಗಾಗಲೇ ರೈತರು ಬೆಳೆದ ಬೆಳೆ ಅರ್ಧಕ್ಕೆ ಬಂದು ನಿಂತಿದೆ’ ಎಂದರು.
ಮುಖಂಡ ಜೆ.ಶರಣಪ್ಪಗೌಡ ಮಾತನಾಡಿದರು.
ಮಾಜಿ ಶಾಸಕ ಹಂಪಯ್ಯ ನಾಯಕ, ದೊಡ್ಡ ಬಸಪ್ಪಗೌಡ ಭೋಗಾವತಿ, ಶರಣಯ್ಯ ಗುಡದಿನ್ನಿ, ಚುಕ್ಕಿ ಶಿವಕುಮಾರ, ಎಂ.ಶ್ರೀನಿವಾಸ, ಮಾರ್ಕಂಡೇಯ ಜಾಲಾಪುರ ಕ್ಯಾಂಪ್, ಶಿವಶರಣಗೌಡ ಲಕ್ಕಂದಿನ್ನಿ, ಎಸ್.ದಾನನಗೌಡ, ನರಸಿಂಹರಾವ್ ಕುಲಕರ್ಣಿ, ರಮೇಶ ದರ್ಶನಕರ್, ಚಂದ್ರು ಕಳಸ, ಕಲ್ಲೂರು ಬಸವರಾಜ ನಾಯಕ,
ಸೂರಿ ದುರುಗಣ್ಣ ನಾಯಕ, ಬಸವರಾಜ ದಳಪತಿ ಜಾಲಾಪುರ, ಮಹಿಬೂಬ್ ಬಡೇಗರ್, ಕಡದಿನ್ನಿ ಬೀರಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿ, ಸಿದ್ಧರಾಮಯ್ಯ ಸ್ವಾಮಿ, ಬೈನೇರ್ ರಾಮಯ್ಯ, ಪಟ್ಟಣ ಪಂಚಾಯಿತಿ ಸದಸ್ಯರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.