ರಾಯಚೂರು: ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ವಿರೋಧವಾಗಿದೆ ಎಂದು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ)ದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಭಂಡಾರಿ ದೂರಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶತಶತಮಾನಗಳಿಂದಲೂ ಶೊಷಣೆಗೆ ಒಳಗಾಗಿದ್ದ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಸಮುದಾಯಗಳಿಗೆ ಅರ್ಥಿಕ, ಸಾಮಾಜಿಕ ಸಮಾನತೆಗೆ ಸಂವಿಧಾನದಿಂದ ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ಇತ್ತಿಚಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ್ ರಾವ್ ಮತ್ತು ಹೇಮಂತ್ ಗುಪ್ತ ಅವರನ್ನೊಳಗೊಂಡ ಪೀಠ ಈ ಸಮುದಾಯಗಳಿಗೆ ಮೀಸಲಾತಿ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೀಸಲಾತಿ ನೀಡಲೇಬೇಕೆಂದೇನಿಲ್ಲ ಅದು ಸರ್ಕಾರದ ವಿವೇಚನಾಧಿಕಾರ, ಮೀಸಲಾತಿ ಮೂಲಭೂತ ಹಕ್ಕು ಎಂದು ಪ್ರತಿಪಾದಿಸುವಂತಿಲ್ಲ ಎಂಬ ತೀರ್ಪು ನೀಡಿರುವುದು ಸರಿಯಲ್ಲ ಎಂದು ಖಂಡಿಸಿದರು.
ಈ ತೀರ್ಪು ಇತ್ತೀಚಿನ ವರ್ಷಗಳಿಂದ ಆರ್.ಎಸ್.ಎಸ್ ಹಾಗೂ ಬಿಜೆಪಿ ಮುಖಂಡರು ಮೀಸಲಾತಿ ವಿರೋಧಿ ನೀತಿಗೆ ಪೂರಕವಾಗಿದೆ ಹಾಗೂ ಜನರು ನ್ಯಾಯಾಲಯಗಳ ಮೇಲೆ ಹೊಂದಿರುವ ಭರವಸೆಗಳಿಗೆ ಧಕ್ಕೆ ತರುವಂತಿದೆ ಎಂದು ಆರೋಪಿಸಿದರು.
ಅಲ್ಲದೇ ಈ ತೀರ್ಪು ಸುಪ್ರೀಂಕೋರ್ಟ್ ನ್ಯಾಯಪೀಠ ಬರೆದಂತಹ ತೀರ್ಪು ಎನ್ನುವುದಕ್ಕಿಂತ ಆರ್. ಎಸ್.ಎಸ್ ಕೇಂದ್ರ ಕಚೇರಿ ನಾಗಪುರದಲ್ಲಿ ಮೀಸಲಾತಿ ವಿರೋಧಿಗಳು ಬರೆದ ತೀರ್ಪಿನಂತಿದೆ ಎಂದರು.
ಈ ಹಿಂದೆ ಮೀಸಲಾತಿ ಮತ್ತು ಬಡ್ತಿ ಮೀಸಲಾತಿಗೆ ಸಂಬಂಧಿಸಿ ಏಳು ನ್ಯಾಯಾಧೀಶರ ಪೀಠವು ಮೀಸಲಾತಿ ಮತ್ತು ಬಡ್ತಿ ಮೀಸಲಾತಿ ಪರವಾಗಿ ತೀರ್ಪು ನೀಡಿದೆ. ಆದರೂ ಸಹ ಮೀಸಲಾತಿ ವಿರುದ್ಧದ ತೀರ್ಪುಗಳು ಮತ್ತೆ ಮತ್ತೆ ಬರುತ್ತಿರುವುದು ಮೀಸಲಾತಿ ವಿರುದ್ಧದ ವ್ಯವಸ್ಥಿತ ಸಂಚಾಗಿದೆ. ದಲಿತರ ಮೀಸಲಾತಿ ಸಂಪೂರ್ಣವಾಗಿ ರದ್ದುಗೊಳಿಸಲು ಆರ್ಎಸ್ಎಸ್ ಸುಪ್ರಿಕೋರ್ಟ್ ಮೂಲಕ ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಈ ತೀರ್ಪು ಎಂದು ದೂರಿದರು. ಕೂಡಲೇ ಕೇಂದ್ರದ ಬಿಜೆಪಿ ಮೇಲ್ಮನವಿ ಸಲ್ಲಿಸಿ ಮೀಸಲಾತಿಗೆ ಬೆಂಬಲಿಸಬೇಕು ಎಂದು ಹೇಳಿದರು.
ಪಕ್ಷದ ಮುಖಂಡರಾದ ಎಂ.ಆರ್.ಭೇರಿ, ಜಾವೀದ್ ಪಾಶಾ, ವೀರೇಶ, ಶಿವರಾಜ ಘಂಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.