ADVERTISEMENT

ರೈತ ಕ್ರಿಯಾ ಯೋಜನೆಗೆ ಅಭಿಯಾನ

ನರೇಗಾ: ರೈತರಿಗೆ ಅಧಿಕಾರಿಗಳಿಂದ ಜಾಗೃತಿ

ಬಸವರಾಜ ಬೋಗಾವತಿ
Published 12 ಅಕ್ಟೋಬರ್ 2020, 7:56 IST
Last Updated 12 ಅಕ್ಟೋಬರ್ 2020, 7:56 IST
ಮಾನ್ವಿ ತಾಲ್ಲೂಕಿನ ಕೊರವಿ ಗ್ರಾಮದಲ್ಲಿ ರೈತ ಕ್ರಿಯಾಯೋಜನೆ ಕುರಿತು ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು
ಮಾನ್ವಿ ತಾಲ್ಲೂಕಿನ ಕೊರವಿ ಗ್ರಾಮದಲ್ಲಿ ರೈತ ಕ್ರಿಯಾಯೋಜನೆ ಕುರಿತು ಜಾಗೃತಿ ಮೂಡಿಸುತ್ತಿರುವ ಅಧಿಕಾರಿಗಳು   

ಮಾನ್ವಿ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 2021-22ನೇ ಸಾಲಿಗೆ ರೈತರ ಕ್ರಿಯಾಯೋಜನೆ ತಯಾರಿಕೆ ಕುರಿತು ಹಮ್ಮಿಕೊಂಡಿರುವ ಜನಜಾಗೃತಿ ಅಭಿಯಾನಕ್ಕೆ ತಾಲ್ಲೂಕಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಅ.2ರಿಂದ 15ರವರೆಗೆ ಈ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳ ನಿರ್ದೇಶನದ ಮೇರೆಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಈ ಅಭಿಯಾನದಲ್ಲಿ ಕಾಮಗಾರಿಗಳ ಬೇಡಿಕೆ ಅರ್ಜಿ ಸಲ್ಲಿಕೆ ಕುರಿತು ಜನಜಾಗೃತಿ ಮೂಡಿಸುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿ ರೈತರು, ಸಾರ್ವಜನಿಕರು ತಮಗೆ ಅವಶ್ಯಕವಾಗಿರುವ ಕಾಮಗಾರಿಗಳನ್ನು ವೈಯಕ್ತಿಕವಾಗಿ ಕೈಗೊಳ್ಳುವ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಆಸಕ್ತ ರೈತರು ಆನ್‍ಲೈನ್ ಮೂಲಕ ಅಥವಾ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕಾಮಗಾರಿಯ ಬೇಡಿಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾದ ಒಂದು ವಾರದಲ್ಲಿ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಆನ್‍ಲೈನ್ ಮೂಲಕ 250ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ.

ADVERTISEMENT

ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೆ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಗಳಿಂದ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಲು ಆರ್ಥಿಕ ನೆರವಿನ ಸೌಲಭ್ಯವನ್ನು ಈ ಯೋಜನೆ ಅಡಿಯಲ್ಲಿ ಪಡೆಯಬಹುದಾಗಿದೆ. ಪ್ರತಿಯೊಬ್ಬ ಫಲಾನುಭವಿಯ ವೈಯಕ್ತಿಕ ಕಾಮಗಾರಿಗೆ ₹ 2.5 ಲಕ್ಷದವರೆಗೆ ಮೀರದಂತೆ ಆರ್ಥಿಕ ನೆರವು ನಿಗದಿಗೊಳಿಸಲಾಗಿದೆ.

ಕಾಮಗಾರಿ ವಿವರ: ತೋಟಗಾರಿಕೆ ಇಲಾಖೆ ಮೂಲಕ ತೆಂಗು, ಮಾವು, ಸಪೊಟ, ನೀಂಬೆ ದಾಳಿಂಬೆ, ನುಗ್ಗೆ ಪಪ್ಪಾಯ, ಕರಿಬೇವು, ನೆಲ್ಲಿ ದ್ರಾಕ್ಷಿ, ಸೀತಾಫಲ, ಬಾಳೆ ಹಾಗೂ ಗುಲಾಬಿ ಹೂ, ಮಲ್ಲಿಗೆ ಹೂ ಬೆಳೆಯಲು ಅವಕಾಶ ನೀಡಲಾಗಿದೆ. ಕೃಷಿ ಹಾಗೂ ಅರಣ್ಯ ಇಲಾಖೆಯ ಮೂಲಕ ಹೊಂಗೆ, ಬೇವು, ಸಾಗುವನಿ, ಹೆಬ್ಬೇವು ಬೆಳೆಯಬಹುದು.

ರೇಷ್ಮೆ ಇಲಾಖೆ ವತಿಯಿಂದ ಹಿಪ್ಪು ನೇರಳೆ ನರ್ಸರಿ, ಹಿಪ್ಪು ನೇರಳೆ ನಾಟಿ ಮತ್ತು ಹಿಪ್ಪು ನೇರಳೆ ಮರಗಡ್ಡಿ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಇದೆ.

ಗ್ರಾಮ ಪಂಚಾಯಿತಿ ವತಿಯಿಂದ ದನದ ಶೆಡ್, ಕುರಿ ಹಾಗೂ ಕೋಳಿ ಸಾಕಣೆ ಶೆಡ್ ನಿರ್ಮಾಣಕ್ಕಾಗಿ ಅನುದಾನದ ನೆರವು ನೀಡಲು ಯೋಜನೆ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.