ADVERTISEMENT

ಎರಡು ಟಿಪ್ಪರ್‌ಗಳ ಮಧ್ಯೆ ಸಿಲುಕಿದ ಕಾರು: ಯುವಕ, ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 8:10 IST
Last Updated 5 ಫೆಬ್ರುವರಿ 2021, 8:10 IST
   

ಹಟ್ಟಿ ಚಿನ್ನದಗಣಿ (ರಾಯಚೂರು): ಎದಿರು ಬದಿರು ಬಂದ ಟಿಪ್ಪರ್‌ಗಳ ಮಧ್ಯೆ ಕಾರು ಸಿಲುಕಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಯುವಕ ಮತ್ತು ಯುವತಿಯ ದೇಹ ಛಿದ್ರಗೊಂಡಿರುವ ಭೀಕರ ಅಪಘಾತ ಘಟನೆವೊಂದು ಲಿಂಗಸುಗೂರು ತಾಲ್ಲೂಕು ಗೋಲಪಲ್ಲಿ ಬಳಿ ಶ್ರೀರಂಗಪಟ್ಟಣ–ಹುಮನಾಬಾದ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.

ಹರ್ಷಿತಾ (26) ಹಾಗೂ ಭುವನ (27) ಸ್ಥಳದಲ್ಲೇ ಮೃತಪಟ್ಟಿದ್ದು, ದೇಹದ ಭಾಗಗಳು ಛಿದ್ರವಾಗಿ ಹೆದ್ದಾರಿಯಲ್ಲಿ ಬಿದ್ದಿದ್ದವು. ಶವ ಹೊರತೆಗೆಯುವುದಕ್ಕೆ ಪೊಲೀಸರು ಹರಸಾಹಸ ಪಟ್ಟಿದ್ದಾರೆ. ಕಾರಿನ ಫಲಕವೂ ಸೇರಿದಂತೆ ಛಿದ್ರವಾಗಿದ್ದರಿಂದ ಮೃತರ ಗುರುತು ಪತ್ತೆ ಮಾಡುವುದು ಕಷ್ಟವಾಗಿದೆ. ಇದೀಗ ಹೆಸರುಗಳು ಮಾತ್ರ ಗೊತ್ತಾಗಿವೆ.

ದೇವದುರ್ಗದಿಂದ ದಾವಣಗೆರೆಯತ್ತ ಕಾರು ಸಂಚರಿಸುತ್ತಿತ್ತು. ಟಿಪ್ಪರ್‌ಗಳು ಕಂಕರ್‌ ಸಾಗಿಸುತ್ತಿದ್ದವು. ಗೋಲಪಲ್ಲಿ ಅಪಘಾತ ವಲಯವಾಗಿದ್ದು, ನಿಧಾನವಾಗಿ ಸಂಚರಿಸುವಂತೆ ಅಲ್ಲಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ. ಇದು ರಾಷ್ಟ್ರೀಯ ಹೆದ್ದಾರಿ ಆಗಿದ್ದರೂ ಎರಡು ವಾಹನಗಳು ಎದುರು ಬದಿರಾಗುವಾಗ ಸ್ವಲ್ಪ ಯಾಮಾರಿದರೂ ಯಮನಪಾದ ಸೇರಬೇಕಾಗುತ್ತದೆ.

ADVERTISEMENT

ಇದೇ ತಾಣದಲ್ಲಿ ಮೇಲಿಂದ ಮೇಲಿಂದ ಅಪಘಾತಗಳು ಸಂಭವಿಸುತ್ತಿದ್ದರೂ, ಅಪಘಾತ ತಪ್ಪಿಸಲು ಅಗತ್ಯ ಕ್ರಮಗಳು ಜಾರಿಯಾಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.