ADVERTISEMENT

Caste Census: ವೀರಶೈವ, ಲಿಂಗಾಯತ ಸಮಾಜದಿಂದ ಬೃಹತ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 11:27 IST
Last Updated 28 ಏಪ್ರಿಲ್ 2025, 11:27 IST
   

ರಾಯಚೂರು: ರಾಜ್ಯದಲ್ಲಿ ಅವೈಜ್ಞಾನಿಕ ಜಾತಿಗಣತಿ ನಡೆಸಲಾಗಿದೆ ಹಾಗೂ ಜನಸಂಖ್ಯೆ ಆಧಾರ ಮೇಲೆ ವೀರಶೈವ, ಲಿಂಗಾಯತ ಸಮಾಜದ ಬಲವನ್ನು ಕುಗ್ಗಿಸಿ ಸಮಾಜ ಒಡೆಯುವ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ಆರೋಪಿಸಿ ವೀರಶೈವ ಹಾಗೂ ಲಿಂಗಾಯತ ಸಮಾಜದ ಮುಖಂಡರು ಸೋಮವಾರ ನಗರದಲ್ಲಿ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಿದರು.

ನಗರದ ಬೈಪಾಸ್ ರಸ್ತೆಯ ರೇಣುಕಾಚಾರ್ಯ ವೃತ್ತದ ಸಮೀಪದ ಹರ್ಷಿತಾ ಗಾರ್ಡನ್ ಬಳಿ ಮುಖಂಡರು ತಲೆಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನಾ ಸಭೆ ನಡೆಸಿದರು. ನಂತರ ನೂತನ ಜಿಲ್ಲಾಡಳಿತ ಕಚೇರಿ ವರೆಗೂ ಬ್ಯಾನರ್‌ ಹಿಡಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು.

2015ರ ಕಾಂತರಾಜು ವರದಿಯ ದತ್ತಾಂಶವನ್ನು ಬದಲಾಯಿಸಿ 2024ರಲ್ಲಿ ಜಯಪ್ರಕಾಶ್ ಹೆಗಡೆ ಸರ್ಕಾರಕ್ಕೆ ನೀಡಿದ ಸಮೀಕ್ಷಾ ವರದಿಯನ್ನು ಅಂಗೀಕರಿಸಬಾರದು ಎಂದು ಮುಖಂಡರು ಒತ್ತಾಯಿಸಿದರು.

ADVERTISEMENT

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಲ್ಲಿ 2015ರಲ್ಲಿ ಪ್ರಾರಂಭವಾದ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯು 51 ಮಾನದಂಡಗಳು ಮೇಲೆ ಕಾಲಂವಾರು 54 ಪ್ರಶ್ನಾವಳಿಗಳನ್ನು ಒಳಗೊಂಡ ಸಮೀಕ್ಷೆಯ ನಮೂನೆಯನ್ನು ಬಳಸಿಕೊಂಡು ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಅದರಲ್ಲಿ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯು ನೈಜತೆಯಿಂದ ಕೂಡಿರದೆ ಜಾತಿ ಹಾಗೂ ಪ್ರವರ್ಗಕ್ಕೆ ಅದರಲ್ಲಿಯೂ ವಿಶೇಷವಾಗಿ ಉಪಜಾತಿಗಳ ವಿಂಗಡಣೆ ಮತ್ತು ಕ್ರೋಡೀಕರಣಕ್ಕೆ ಸೀಮಿತವಾದಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ಪ್ರತಿ 10 ವರ್ಷಗಳ ಅವಧಿಯಲ್ಲಿ ಹಿಂದುಳಿದಜಾತಿ, ಸಮುದಾಯಗಳನ್ನು ಇಂತಹ ಪಟ್ಟಿಯಿಂದ ಕೈಬಿಡುವ ಅಥವಾ ಹೊಸದಾಗಿ ಸೇರಿಸುವ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿ ಪರಿಷ್ಕರಣೆಯನ್ನು ಕೈಗೊಳ್ಳಬಹುದಾಗಿದೆ ಎಂದು ಕೆ.ಎಸ್.ಸಿ.ಬಿ.ಸಿ. ಅಧಿನಿಯಮ 1995ರ ಪ್ರಕರಣ 2ರಲ್ಲಿ ಸ್ಪಷ್ಟಪಡಿಸಲಾಗಿದೆ. 10 ವರ್ಷಗಳಿಗೂ ಹಿಂದಿನ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆಧಾರದ ಜಾತಿ ಗಣತಿ ವರದಿಯನ್ನು ಈಗ ಪರಿಗಣನೆಗೆ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚಿನ್ನಪ್ಪರೆಡ್ಡಿ ಆಯೋಗದಲ್ಲಿ ವೀರಶೈವ ಸಮಾಜದ 61 ಉಪಪಂಗಡಗಳನ್ನು ಗುರುತಿಸಿದ್ದು, ಅದರಲ್ಲಿ ಶೇಕಡ 17ರಷ್ಟು ಜನಸಂಖ್ಯೆ ಇವೆ. ಶೇಕಡವಾರು 11ಕ್ಕೆ ಇಳಿದಿರುವುದು ಸಮೀಕ್ಷೆಯಲ್ಲಿರುವ ದೋಷವನ್ನು ತೋರಿಸುತ್ತದೆ ಎಂದು ಅಸಮಾಧಾನ ಹೊರಹಾಕಿದರು.

ವೀರಶೈವ, ಲಿಂಗಾಯತ ಉಪ ಪಂಗಡಗಳಿರುವ ಸುಮಾರು ಉಪ ಪಂಗಡಗಳ ಹೆಸರುಗಳು ಕೆಟಗರಿ 3ಬಿ, 2ಎ, ಕೆಟಗರಿ 1, 1ಎ ಮತ್ತು 1ಬಿ ನಲ್ಲಿ ಇವೆ. ಕೆಟಗರಿಯಲ್ಲಿರುವ ಸಮಾನರೂಪದ ಪಂಗಡಗಳಲ್ಲಿಯೂ ಸಹ ಏರಿಕೆಯಾಗಿರುವುದು ಕಂಡು ಬಂದಿರುವುದಿಲ್ಲ ಎಂದು ದೂರಿದರು.

ನಂತರ ಜಿಲ್ಲೆಯ ಮಠಾಧೀಶರು, ಶಾಸಕರು ಹಾಗೂ ಸಮಾಜ ಸಂಘಟನೆ ಮುಖಂಡರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

ರಾಯಚೂರು ನಗರ ಶಾಸಕ ಡಾ. ಶಿವರಾಜ ಪಾಟೀಲ, ವಿಧಾನ ಪರಿಷತ್ ಸದಸ್ಯರಾದ ಬಸನಗೌಡ ಬಾದರ್ಲಿ, ಶರಣಗೌಡ ಬಯ್ಯಾಪೂರ, ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ವೀರಶೈವ ಲಿಂಗಾಯತ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಶರಣಭೂಪಾಲ ನಾಡಗೌಡ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ ಮಿರ್ಜಾಪುರ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರ, ವೀರಶೈವ ರುದ್ರಸೇನ ಜಿಲ್ಲಾ ಘಟಕದ ಅಧ್ಯಕ್ಷ ಶಿವಶರಣರಡ್ಡಿ, ಮಠಾದೀಶರು ಹಾಗೂ ವೀರಶೈವ, ಲಿಂಗಾಯತ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.