ರಾಯಚೂರು: ಇಲ್ಲಿನ ನೇತಾಜಿ ನಗರದ ವಾರ್ಡ್ ನಂ. 15 ರ ಅಂಬಾಭವಾನಿ ಹುಲಿಗೆಮ್ಮದೇವಿ ದೇವಸ್ಥಾನದ ಸಮೀಪ ಹಾಯ್ದು ಹೋದ ರಾಜ ಕಾಲುವೆಯನ್ನು ಒತ್ತುವರಿ ಮಾಡಿ ಕಟ್ಟಡಗಳ ನಿರ್ಮಾಣ ಮಾಡಿಕೊಂಡಿದ್ದರಿಂದ ನೀರು ಹರಿಯಲು ಸಮಸ್ಯೆಯಾಗಿದೆ ಕೂಡಲೇ ಒತ್ತುವರಿ ತೆರವು ಗೊಳಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ ಸಂಚಾಲಕ ಪರಶುರಾಮ ಒತ್ತಾಯಿಸಿದರು.
ಭೂಗಳ್ಳರು ರಾಜಕಾಲುವೆ ಅತಿಕ್ರಮಣ ಮಾಡಿಕೊಂಡು ಮಳಿಗೆಗಳನ್ನು ಕಟ್ಟಿಕೊಂಡಿದ್ದಾರೆ. ಹೀಗಾಗಿ ಮಳೆ ನೀರು ಸಾರಗವಾಗಿ ಹರಿದು ಹೋಗುತ್ತಿಲ್ಲ. ನೀರು ಹರಿವಿನ ದಿಕ್ಕು ಬದಲಾದ ಕಾರಣ ತಗ್ಗು ಪ್ರದೇಶದ ಜನರ ಮನೆಗೆ ನೀರು ನುಗ್ಗುತ್ತಿದೆ ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ದೂರಿದರು.
ನೇತಾಜಿನಗರ ಸೇರಿ ಇತರೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ಥವಾಗುತ್ತಿದೆ. ವಸ್ತುಗಳು, ದಾಖಲಾತಿಗಳು ಹಾಳಾಗಿವೆ. ವಿಷ ಜಂತುಗಳು ಮನೆಯೊಳಗೆ ಸೇರುವಂತಾಗಿದೆ ಎಂದು ತಿಳಿಸಿದರು.
ಒತ್ತುವರಿ ತೆರವು ಗೊಳಿಸಲು ಜಿಲ್ಲಾಡಳಿತಕ್ಕೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ ಎಂದು ಜಿಲ್ಲಾಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಬಡಾವಣೆಯಲ್ಲಿನ ಕಸವನ್ನು ಮಟಮಾರಿ ನಾಗಪ್ಪ ಮನೆಯ ಮುಂಭಾಗದಲ್ಲಿಯೇ ಸಂಗ್ರಹ ಮಾಡುತ್ತಿದ್ದಾರೆ.. ಇದರಿಂದ ಬಡಾವಣೆಯಲ್ಲಿ ದುರ್ವಾಸನೆ ಹಬ್ಬಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಮಹಾನಗರಪಾಲಿಕೆ ಅಧಿಕಾರಿಗಳು ಘನತ್ಯಾಜ್ಯ ವಿಲೇವಾರಿಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಡಿದರು. ಮಹೇಶ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.