ಹಟ್ಟಿಚಿನ್ನದಗಣಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಶಾಸಕ ರಾಜುಗೌಡ ಆಪಾದಿಸಿದರು.
ಪಟ್ಟಣದ ಕೋಠಾ ಕ್ರಾಸ್ ಬಳಿ ಇರುವ ಪೈ ಭವನದದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಪಕ್ಷದ ಬಹಿರಂಗ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು.
ಕೇಂದ್ರ ಸರ್ಕಾರಕ್ಕೆ ಸಾಲಮನ್ನಾದ ಪಟ್ಟಿಯನ್ನು ಕಳುಹಿಸದೆ ಮೋದಿ ಅವರ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಡಿಜಿಟಲ್ ಇಂಡಿಯಾ ಬಂದಾಗಿನಿಂದ ಹಳ್ಳಿಗಳಲ್ಲಿ ಕುಳಿತು ದೇಶದ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಳ್ಳುವಂತಾಗಿದೆ. ಇದು ಮೋದಿಯವರ ಸಾದನೆ. ಮಹಿಳೆಯರಿಗಾಗಿ ಉಚಿತವಾಗಿ ಗ್ಯಾಸ್, ಆರೋಗ್ಯಕ್ಕಾಗಿ ಆಯುಷ್ ಕಾರ್ಡ್ ಸೇರಿದಂತೆ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದದ ನೀಡಿದೆ ಎಂದು ಹೇಳಿದರು.
ಶಾಸಕ ಶಿವನಗೌಡ ನಾಯಕ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಬಿ.ವಿ. ನಾಯಕ ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಅದನ್ನು ಬಿಟ್ಟರೆ ಕುಂಬಕರ್ಣನಂತೆ ನಿದ್ದೆ ಮಾಡುವುದು ಅಷ್ಟೆಗೊತ್ತು. ಅಂತಹ ಅಭ್ಯರ್ಥಿಯಿಂದಾಗಿ ಅಭಿವೃದ್ಧಿ ಕಾರ್ಯಗಳು ನನೆಗುದಿಗೆ ಬಿದ್ದಿವೆ. ಈ ಭಾರಿ ಲೋಕಸಭೆ ಚುನಾವಣೆಯಲ್ಲಿ ಬಿ.ವಿ.ನಾಯಕ ಅವರನ್ನು ಸೋಲಿಸುವುದರ ಮೂಲಕ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದಿಂದ ಗೆದ್ದ ತಂದೆ-ಮಗ 30 ವರ್ಷಗಳಿಂದ ಜಿಲ್ಲೆಯಲ್ಲಿ ದರೋಡೆ ಮಾಡುತ್ತಿದ್ದಾರೆ. ಪಟ್ಟಣದಲ್ಲಿ ಕುಡಿವ ನೀರಿಗಾಗಿ ಪರದಾಡುತ್ತಿದ್ದು ಜನರ ನೋವು ಅವರಿಗೆ ತಿಳಿಯುತ್ತಿಲ್ಲ. ಚುನಾವಣೆ ಹತ್ತಿರ ಇದ್ದಾಗ ಮಾತ್ರ ಜನರಿಗೆ ಮುಖ ತೊರಿಸುತ್ತಾರೆ. ಗೆದ್ದ ನಂತರ ಇತ್ತ ಕಡೆ ಸುಳಿಯುವುದಿಲ್ಲ. ಈ ಭಾರಿ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ನೀಡಬೇಕು ಎಂದರು.
ರಾಜ ಅಮರೇಶ್ವರ ನಾಯಕ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು. ಕಾಂಗ್ರೆಸ್ ಪಕ್ಷ 30 ವರ್ಷ ಆಡಳಿತ ಮಾಡಿದರೂ ಕುಡಿವ ನೀರು, ರಸ್ತೆ ಚರಂಡಿ ಸೇರಿದಂತೆ ಅಭಿವೃದ್ದಿ ಕಾರ್ಯಗಳು ಜರುಗಿಲ್ಲ. ಈ ಭಾರಿ ಬಹುಮತಗಳಿಂದ ಬಿಜೆಪಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಜಿಜೆಪಿ ಹಿರಿಯ ಮುಖಂಡ ಗುಂಡಪ್ಪಗೌಡ ಮಾತನಾಡಿದರು.
ಮಾಜಿ ಸಚಿವ ಬಸವರಾಜ ಪಾಟೀಲ ಆನ್ವರಿ, ಮಾಜಿ ಶಾಸಕ ಮಾನಪ್ಪ ವಜ್ಜಲ್, ಜೆಡಿಎಸ್ ಪಕ್ಷದ ತಾಪಂ ಸದಸ್ಯೆ ಬಸಮ್ಮ ಪರಮೇಶ ಯಾದವ, ಗುಂಡಪ್ಪಗೌಡ ಪೊಲೀಸ್ ಪಾಟೀಲ, ಕಂಟ್ಟೆಪ್ಪಗೌಡ, ಗಿರಿಮಲ್ಲನಗೌಡ, ಅಯ್ಯಪ್ಪ ವಕೀಲ, ಗೋವಿಂದ ನಾಯಕ, ವೆಂಕಟೇಶ, ಫರಮೇಶ ಯಾದವ, ಮಾಸ್ಟರ್ ಗುಂಡಪ್ಪಗೌಡ, ಶಿವರಾಜಗೌಡ ಗುರಿಕಾರ, ಶರಣುಬಸವ, ವೆಂಕೋಬ್ಬ ಪವಾಡೆ, ರಮೇಶ ಉಳಿಮೊಸರು, ಬಸು ಹಟ್ಟಿ ವಸೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.