ADVERTISEMENT

ಮಸ್ಕಿ ಕ್ಷೇತ್ರದಲ್ಲಿ ಹತ್ತೇ ದಿನಗಳಲ್ಲಿ ಕ್ರಾಂತಿಕಾರಿ ಬದಲಾವಣೆ: ಸಿಎಂ ಬಿಎಸ್‌ವೈ

ಉಪಚುನಾವಣೆ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2021, 10:03 IST
Last Updated 11 ಏಪ್ರಿಲ್ 2021, 10:03 IST
ಮುದಗಲ್‌ ಪಟ್ಟಣದಲ್ಲಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು
ಮುದಗಲ್‌ ಪಟ್ಟಣದಲ್ಲಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತನಾಡಿದರು   

ಮುದಗಲ್‌ (ರಾಯಚೂರು): ‘ಕಳೆದ 10 ದಿನಗಳಲ್ಲಿ ಮಸ್ಕಿ ವಿಧಾನಸಭೆ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಆಗಿದೆ’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಪಟ್ಟಣದಲ್ಲಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರ ಮನೆ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದರು.

‘ವಿಜಯೇಂದ್ರ, ಎನ್.ರವಿಕುಮಾರ್ ಅವರು ಮೊದಲೆ ಬಂದು ಮತದಾರರಿಗೆ ಉಪಚುನಾವಣೆ ಮಹತ್ವ‌ ತಿಳಿ ಹೇಳಿದ್ದಾರೆ.ಕ್ಷೇತ್ರದ ಪ್ರತಿಕ್ರಿಯೆ ನೋಡಿ‌ ಅಚ್ಚರಿಯಾಗಿದೆ’ ಎಂದರು.

ADVERTISEMENT

‘ಈ ಸಭೆಯಲ್ಲಿ‌ ಭಾಗವಹಿಸಿದವರು ಬಿಜೆಪಿಗೆ ಮತ ನೀಡುವುದು ದೊಡ್ಡ ಮಾತಲ್ಲ. ಪರಿಶಿಷ್ಟ ಸಮುದಾಯದ ಜನರ‌ ಮನವೊಲಿಕೆ ಮಾಡಿ ಮತ ಪಡೆಯಬೇಕು. ಸಮಾಜದ ಪ್ರತಿಯೊಂದು ಸಮುದಾಯದ ಮನವೊಲಿಸುವ ಶಕ್ತಿ ವೀರಶೈವ ಲಿಂಗಾಯತ ಸಮಾಜಕ್ಕಿದೆ. ಸಿದ್ದರಾಮಯ್ಯ ಬಂದಿದ್ದಾರೆ ಒಂದು ಸಭೆ ಮಾಡಿ ಹೋಗುತ್ತಾರೆ. ಅದರಿಂದ ಏನೂ ಆಗುವುದಿಲ್ಲ. ಉಪಚುನಾವಣೆ ಬಳಿ ಮತ್ತೊಂದು ಸಭೆ ಮಾಡೋಣ. ನಿಮ್ಮ‌ಬೇಡಿಕೆಗಳ ಪಟ್ಟಿ‌ಕೊಡಿ. ಅವುಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ’ ಎಂದು ತಿಳಿಸಿದರು.

‘ವೀರಶೈವ ಲಿಂಗಾಯತ ಮುಖಂಡರು ಬೇರೆ ಎಲ್ಲ ಕೆಲಸ ಬದಿಗಿಟ್ಟು ಮತ ನೀಡುವ ಜೊತೆಗೆ ಬೇರೆಯವರ ಮತ ಕೊಡಿಸುವ ಕೆಲಸ ಮಾಡಬೇಕು’ ಎಂದು ಕರೆ ನೀಡಿದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್.ಪಾಟೀಲ‌ ಅವರ ನಂತರ‌ ಸಮಾಜದ ನಾಯಕತ್ವಕ್ಕಾಗಿ ಹುಡುಕಾಡುತ್ತಿದ್ದವು. ಇದೀಗ ಬಿ.ಎಸ್‌.ಯಡಿಯೂರಪ್ಪ ಆ ಸ್ಥಾನ ತುಂಬಿದ್ದಾರೆ. ಮಸ್ಕಿ ಕ್ಷೇತ್ರದ ಅಭಿವೃದ್ದಿಗಾಗಿ ಪ್ರತಾಪಗೌಡ‌ಅವರನ್ನು ಆಯ್ಕೆ ಮಾಡಬೇಕಿದೆ. ಭಿನ್ನಾಭಿಪ್ರಾಯ ಮರೆತು ಬಿಜೆಪಿ‌ ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂದು ಕೋರಿದರು.

ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಆರಂಭದಲ್ಲಿ ಮಸ್ಕಿ‌ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಮಾತುಗಳಿದ್ದವು. ಈಗ ಬಿಜೆಪಿ ಗೆಲ್ಲುತ್ತದೆ ಎನ್ನುವ ಮಾತನ್ನು ಕಾಂಗ್ರೆಸ್ ಕಾರ್ಯಕರ್ತರು ಹೇಳುತ್ತಿದ್ದಾರೆ. ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಎಲ್ಲ ಕಡೆಗೂ ಭವ್ಯ ಸ್ವಾಗತ ಸಿಕ್ಕಿದೆ. ಈ ಭಾಗದಲ್ಲಿ ಬಡತನ‌ ಇರಬಹುದು; ಸ್ವಾಭಿಮಾನಕ್ಕೆ ಕೊರತೆ ಇಲ್ಲ. ಕಾಂಗ್ರೆಸ್ ಅಭಿವೃದ್ಧಿ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದರು.

ಸಚಿವ ಸಿ.ಸಿ.ಪಾಟೀಲ,ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ,ಶಾಸಕರಾದ ಪರಣ್ಣ ಮುನ್ನಳ್ಳಿ, ಎ.ಎಸ್.ಪಾಟೀಲ ನಡಹಳ್ಳಿ, ರೇಣುಕಾಚಾರ್ಯ,ಮುಖಂಡ ಮಲ್ಲಪ್ಪ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.