ADVERTISEMENT

ಪೌರಕಾರ್ಮಿಕರಿಗೆ ಸಮರ್ಪಕ ವೇತನ; ನಿರ್ಧಾರ

ರಾಯಚೂರು ನಗರಸಭೆ ಸಾಮಾನ್ಯ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 26 ಜುಲೈ 2021, 14:32 IST
Last Updated 26 ಜುಲೈ 2021, 14:32 IST
ರಾಯಚೂರು ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಮಹಾಸಭೆಯಲ್ಲಿ ಸದಸ್ಯ ಜಯಣ್ಣ ಮಾತನಾಡಿದರು
ರಾಯಚೂರು ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಾಮಾನ್ಯ ಮಹಾಸಭೆಯಲ್ಲಿ ಸದಸ್ಯ ಜಯಣ್ಣ ಮಾತನಾಡಿದರು   

ರಾಯಚೂರು: ಹೊರಗುತ್ತಿಗೆ ಪೌರಕಾರ್ಮಿಕರಿಗೆ ಸಮರ್ಪಕವಾಗಿ ಪ್ರತಿತಿಂಗಳು ವೇತನ ಪಾವತಿಸುವುದಕ್ಕೆ ನಗರಸಭೆಯಲ್ಲಿ ಸೋಮವಾರ ನಡೆದ ಸಾಮಾನ್ಯಸಭೆಯಲ್ಲಿ ಚರ್ಚಿಸಿ ಸದಸ್ಯರು ನಿರ್ಧರಿಸಿದರು.

ನಗರಸಭೆಯಲ್ಲಿ 280 ಜನ ಗುತ್ತಿಗೆ ಕಾರ್ಮಿಕರ ಕೆಲಸ ಮಾಡುತ್ತಿದ್ದು, ಪ್ರತಿತಿಂಗಳು ₹50 ಲಕ್ಷ ವೇತನ ನೀಡಲಾಗುತ್ತಿದೆ. ಗೈರು ಹಾಜರಾದ ಕಾರ್ಮಿಕರ ವೇತನವನ್ನು ಸರಿದೂಗಿಸಲು ಕ್ರಮ ತೆಗೆದುಕೊಳ್ಳಲು ನಿಯಮದಲ್ಲಿ ಅವಕಾಶವಿದೆಯೆ ಎಂದು ಸದಸ್ಯ ಜಯಣ್ಣ ಅವರು ಪ್ರಶ್ನಿಸಿದರು.

ನಗರಸಭೆಯಲ್ಲಿ 280 ಹೊರಗುತ್ತಿಗೆ ಕಾರ್ಮಿಕರ ಗೈರುಹಾಜರಿಯಾದ ಕಾರ್ಮಿಕರ ವೇತನದಲ್ಲಿ 150 ಕಾರ್ಮಿಕರಿಗೆ ವೇತನ ನೀಡಲು ಸಭೆಯಲ್ಲಿ ಅಂತಿಮವಾಗಿ ತೀರ್ಮಾನ ತೆಗೆದುಕೊಳ್ಳಲಾಯಿತು. ಉಮೇಶ ಎನ್ನುವ ಕಾರ್ಮಿಕನಿಗೆ ಐದು ತಿಂಗಳ ಬಾಕಿ ವೇತನ ಪಾವತಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.

ADVERTISEMENT

ನಗರಸಭೆ ಸದಸ್ಯ ಎನ್.ಶ್ರೀನಿವಾಸರೆಡ್ಡಿ ಮಾತನಾಡಿ, ನಗರಸಭೆಯ 300 ಮಳಿಗೆಗಳಿದ್ದರೂ ಬಾಡಿಗೆ ವಸೂಲಿಯಾಗುತ್ತಿಲ್ಲ. ಕೇವಲ ₹48 ಸಾವಿರ ಜಮಾ ಮಾಡಲಾಗಿದೆ. ಆದರೆ, ಪ್ರತಿ ಸಭೆಯಲ್ಲಿಯೂ ಮಳಿಗೆಗಳ ಟೆಂಡರ್ ಕರೆಯಬೇಕು ಎಂದು ಒತ್ತಾಯಿಸುತ್ತಾ ಬರಲಾಗಿದೆ. ಆದರೆ, ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷ ಈ.ವಿನಯಕುಮಾರ ಹಾಗೂ ಪೌರಾಯುಕ್ತ ಕೆ.ಮುನಿಸ್ವಾಮಿ ಮಾತನಾಡಿ, ಮುಂದಿನ ದಿನಗಳಲ್ಲಿ ನಗರದಲ್ಲಿರುವ ನಗರಸಭೆ ಮಳಿಗೆಗಳ ಟೆಂಡರ್ ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ನಗರಸಭೆ ಸದಸ್ಯ ನರಸರೆಡ್ಡಿ ಮಾತನಾಡಿ, ಮೆಗಾ ರೆಸ್ಟೊರೆಂಟ್ ವಾರ್ಡ್ ನಂಬರ್ 33ರ ವ್ಯಾಪ್ತಿಯಲ್ಲಿ ಬರುವುದಿಲ್ಲ. ಆದರೂ ನಗರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿ ನೀಡಲಾಗಿದೆ. ನಳದ ಸಂಪರ್ಕ ಕಲ್ಪಿಸಲಾಗಿದೆ. ಚಿಕ್ಕಸುಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವುದರಿಂದ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳದೇ ಇದ್ದರೆ, ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಈ ಪ್ರಕರಣ ನ್ಯಾಯಾಲಯದಲ್ಲಿರುವ ಇರುವುದರಿಂದ ಸಭೆಯಲ್ಲಿ ಮಾತನಾಡಲು ಸಾಧ್ಯವಾಗುತ್ತಿಲ್ಲ. ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಹೇಳಿದರು.

ಜಯಣ್ಣ ಮಾತನಾಡಿ, ನಗರದ ಎಲ್ಲ ವಾರ್ಡ್‌ಗಳಲ್ಲಿಯೂ ರಸ್ತೆ ಅಗಲೀಕರಣ ನಡೆಯುತ್ತದೆ. ಹೀಗಾಗಿ ಎಲ್ಲ ಸದಸ್ಯರು ಒಟ್ಟಾಗಿ ನಿಯೋಗದೊಂದಿಗೆ ಬೆಂಗಳೂರಿಗೆ ತೆರಳಿ ನಗರಾಭಿವೃದ್ಧಿ ಇಲಾಖೆ ಹಿರಿಯ ಅಧಿಕಾರಿಗಳಿಗೆ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.

ಸಾಜೀದ್‌ ಸಮೀರ್‌ ಮಾತನಾಡಿ, ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮದ ಪ್ರಕಾರ, ಅನುದಾನ ಮೀಸಲಿಡಬೇಕು ಎಂದರು.

ನಗರಸಭೆ ಅಧ್ಯಕ್ಷ ಇ.ವಿನಯಕುಮಾರ್‌ ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಮಾಡಿರುವಂತೆ ಪ್ರತಿ ವಾರ್ಡ್‌ಗೂ ₹10 ಲಕ್ಷ ಅನುದಾಆನ ಒದಗಿಸಲು ಸರ್ಕಾರದಿಂದ ಅನುಮೋದನೆ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಜೆಟ್‌ನಲ್ಲಿ ಸೇರ್ಪಡೆಯಾಗಲಿಲ್ಲ ಎನ್ನುವ ಕಾರಣಕ್ಕೆ ಅನುದಾನ ಬಳಕೆ ಮಾಡುವುದನ್ನು ತಡೆಯುವುದು ಸರಿಯಲ್ಲ. ಟೆಂಡರ್‌ ಪ್ರಕ್ರಿಯೆ ನಡೆಸುವುದಕ್ಕೆ ಸಭ ಅನುಮೀದನೆ ಸೂಚಿಸಿದೆ. ಪ್ರಧಾನಮಂತ್ರಿ 15 ಅಂಶಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸೂಕ್ತ ಆದೇಶವನ್ನು ತೋರಿಸಿದರೆ ಅನುದಾನ ಮೀಸಲಿಡಲಾಗುವುದು ಎಂದರು.

ಪೌರಾಯುಕ್ತ ಮುನಿಸ್ವಾಮಿ ಮಾತನಾಡಿ, ಅನುದಾನ ಹಂಚಿಕೆಯನ್ನು ನಗರಾಭಿವೃದ್ಧಿ ಪ್ರಾದಿಕಾರ ತಡೆದಿಲ್ಲ. ಹಣಕಾಸು ಇಲಾಖೆಯು ಈ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದೆ. ಕೂಡಲೇ ಈ ಬಗೆಗಿನ ಗೊಂದಲವನ್ನು ನಿವಾರಿಸಿ ಅನುದಾನ ಹಂಚಿಕೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷೆ ನರಸಮ್ಮ ನರಸಪ್ಪ ಮಾಡಗಿರಿ, ನಗರಸಭೆ ಸದಸ್ಯರಾದ ಎನ್.ಕೆ ನಾಗರಾಜ, ಬಸವರಾಜ ಪಾಟೀಲ್ ದರೂರು, ಜಿಂದಪ್ಪ, ಶರಣಪ್ಪ ಬಲ್ಲಟಗಿ, ಎಸ್.ರಾಜು, ಗೋವಿಂದ ಹಾಗೂ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.