ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಹೋರಾಟ ಸಮಿತಿ ರಚನೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2021, 11:33 IST
Last Updated 17 ಏಪ್ರಿಲ್ 2021, 11:33 IST
ಶಕ್ತಿನಗರ ಬಳಿಯ ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸುವ ಕುರಿತು ನಡೆದ ಸಭೆಯಲ್ಲಿ ವೈದ್ಯ ಡಾ.ಶಾರದ ಹುಲಿನಾಯಕ ಮಾತನಾಡಿದರು
ಶಕ್ತಿನಗರ ಬಳಿಯ ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರು ಮಾಡಿಸುವ ಕುರಿತು ನಡೆದ ಸಭೆಯಲ್ಲಿ ವೈದ್ಯ ಡಾ.ಶಾರದ ಹುಲಿನಾಯಕ ಮಾತನಾಡಿದರು   

ದೇವಸೂಗೂರು (ಶಕ್ತಿನಗರ): ದೇವಸೂಗೂರು ಮತ್ತು ಡಿ.ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕಾಗಿ ಶುಕ್ರವಾರ ದೇವಸೂಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಭೆಯಲ್ಲಿ ಹೋರಾಟ ಸಮಿತಿಯನ್ನು ರಚನೆ ಮಾಡಲಾಯಿತು.

ದೇವಸೂಗೂರು, ಡಿ.ಯದ್ಲಾಪುರ, ಕಾಡ್ಲೂರು ಉಪ ಕೇಂದ್ರಗಳನ್ನು ಯಾಪಲದಿನ್ನಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ, ಜೇಗರಕಲ್, ಮೀರಪುರಾ ಕೇಂದ್ರಗಳನ್ನು ಕಲಮಲಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮತ್ತು ಚಿಕ್ಕಸೂಗೂರು, ವಡ್ಲೂರು, ಶಾಖವಾದಿ ಉಪ ಕೇಂದ್ರಗಳನ್ನು ಚಂದ್ರಬಂಡಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕ ಸೇರಿಸಲಾಗಿದೆ.

50 ರಿಂದ 60 ಕಿಲೋ ಮೀಟರ್ ದೂರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಇವೆ. ಲಸಿಕಾ ಕಾರ್ಯಕ್ರಮಗಳು ಸೇರಿದಂತೆ ಇನ್ನಿತರ ಸಭೆ ಸಮಾರಂಭಗಳಿಗೆ ತೆರಳಲು, ಆರೋಗ್ಯ ಸಿಬ್ಬಂದಿಗೆ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ತೊಂದರೆ ಆಗುತ್ತಿದೆ. ಅಲ್ಲದೆ, ಸೂಕ್ತ ಚಿಕಿತ್ಸೆಗಾಗಿ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ.

ADVERTISEMENT

ಜಾಗದ ಕೊರತೆ ನೆಪ ಹೇಳಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಕ್ಕಾಗಿ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಡಿ.ಯದ್ಲಾಪುರ ಅಥವಾ ದೇವಸೂಗೂರು ಗ್ರಾಮದಲ್ಲಿ ಪ್ರತ್ಯೇಕವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿಸಿ, ರೋಗಿಗಳಿಗೆ ಸೂಕ್ತ ಚಿಕಿತ್ಸೆಗಾಗಿ ಅನುವು ಮಾಡಿಕೊಡಬೇಕು ಎಂದು ವೈದ್ಯ ಡಾ.ಶಾರದಾ ಹುಲಿನಾಯಕ ಅವರು ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ ದೊಡ್ಡಿ, ಕಾರ್ಯದರ್ಶಿ ರೇಣುಕಾಮ್ಮ, ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ನಿರ್ಮಲಾ, ಆರೋಗ್ಯ ಸಹಾಯಕಿ ಹುಲಿಗೆಮ್ಮ, ಪ್ರಮುಖರಾದ ವಿರೇಶ, ಚನ್ನಬಸವ ಜಾನೇಕಲ್, ಜಿಂದಪ್ಪ, ಸುಭಾಶ, ನರಸಪ್ಪ , ಸಿ.ಸುರೇಶಗೌಡ, ಆಂಜಿನಯ್ಯ, ಶರಣಪ್ಪ ಮತ್ತಿತ್ತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.