ಕವಿತಾಳ: ನಿರಂತರ ಮಳೆಯಿಂದ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕಟ್ಟಡ ಸೋರುತ್ತಿದೆ. ಚಾವಣಿಯಿಂದ ತೊಟ್ಟಿಕ್ಕುವ ನೀರು ಆಸ್ಪತ್ರೆಗೆ ತಪಾಸಣೆಗೆ ಬರುವ ರೋಗಿಗಳ ತಲೆ ಮೇಲೆ ಬೀಳುವಂತಾಗಿದೆ.
ಅವಿಭಜಿತ ಮಾನ್ವಿ ತಾಲ್ಲೂಕಿನಲ್ಲಿ 30 ಹಾಸಿಗೆ ಸಾಮರ್ಥ್ಯದ ಏಕೈಕ ಸಮುದಾಯ ಆರೋಗ್ಯ ಕೇಂದ್ರ ಇದಾಗಿದೆ. ತಜ್ಞ ವೈದ್ಯರ ಕೊರತೆ ಇದೆ. ಪಟ್ಟಣ ಸೇರಿ ಸುತ್ತಮುತ್ತಲಿನ ಹಳ್ಳಿಗಳಿಂದ ನಿತ್ಯ 300ಕ್ಕೂ ಅಧಿಕ ರೋಗಿಗಳು ತಪಾಸಣೆಗೆ ಬರುತ್ತಾರೆ. ಹೆರಿಗೆ ಹಾಗೂ ಅಪಘಾತದಲ್ಲಿ ಗಾಯಗೊಂಡವರು ತುರ್ತು ಚಿಕಿತ್ಸೆಗೆ ಈ ಆಸ್ಪತ್ರೆಯನ್ನು ಅವಲಂಬಿಸಿದ್ದಾರೆ.
ಕಟ್ಟಡ ಹಳೆಯದಾಗಿದ್ದು, ಚಾವಣಿ ಮೇಲಿನ ಕಸ–ಕಡ್ಡಿಯ ಜೊತೆಗೆ ಮಳೆ ನೀರು ಸಂಗ್ರಹವಾಗಿ ಎರಡು ದಿನಗಳಿಂದ ಸೋರುತ್ತಿದೆ ಮತ್ತು ಗೋಡೆಗಳೂ ಹಸಿಯಾಗಿ ತೇವ ಹಿಡಿದಿವೆ.
‘ಆಸ್ಪತ್ರೆಗೆ ಬರುವ ರೋಗಿಗಳು ನೀರಿನಲ್ಲಿ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಈಗ ಸತತ ಮಳೆಯಿಂದ ಚಾವಣಿ ಸೋರುತ್ತಿದ್ದು, ರೋಗಿಗಳು ತೊಂದರೆ ಅನುಭವಿಸುವಂತಾಗಿದೆ. ಚಿಕಿತ್ಸೆ ಪಡೆಯಲು ವೈದ್ಯರ ಕೊಠಡಿ ಮುಂದೆ ಕಾಯ್ದು ನಿಂತರೆ ಬಾಗಿಲ ಮೇಲಿಂದ ನೀರು ಜಿನುತ್ತಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಿ ತುರ್ತು ದುರಸ್ತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.