ರಾಯಚೂರು: ಸರ್ಕಾರಿ ನೌಕರರಿಗೆ ಸಮುದಾಯ, ಸಂಘಟನೆಗಳ ಬೆಂಬಲ ಅವಶ್ಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ಎಸ್ ಬೋಸರಾಜ ಹೇಳಿದರು.
ನಗರದ ಪಂಡಿತ್ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಕನಕ ನೌಕರರ ಸಂಘದ ತಾಲ್ಲೂಕು ಘಟಕದಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಒತ್ತಡಗಳ ಮಧ್ಯೆ ಸರ್ಕಾರಿ ನೌಕರರು ಕಾರ್ಯನಿರ್ವಹಿಸುವುದು ಸಮಸ್ಯೆಯಾಗುತ್ತಿದೆ. ಕಳಪೆ ಗುಣಮಟ್ಟದ ಶೂ ವಿತರಣೆ ಆರೋಪದಡಿ ಏಳು ಜನ ಮುಖ್ಯಾಧ್ಯಾಪಕರನ್ನು ಅಮಾನತು ಮಾಡಿರುವುದು ಸೂಕ್ತ ನಿದರ್ಶನವಾಗಿದೆ. ರಾಜ್ಯದಲ್ಲಿ ಯಾವುದೇ ಜಿಲ್ಲೆಯಲ್ಲಿ ಆಗದ ಶಿಕ್ಷೆ ರಾಯಚೂರು ಜಿಲ್ಲೆಯಲ್ಲಿ ಕಳಪೆ ಶೂ ಖರೀದಿಯಿಂದ ಅಮಾನತಿನ ಶಿಕ್ಷೆಯಾಗಿರುವುದು ವಿಪರ್ಯಾಸವಾಗಿದೆ ಎಂದು ತಿಳಿಸಿದರು.
ಖರೀದಿ ಮಾಡುವಲ್ಲಿ ಯಾರ ಪಾತ್ರ ಇದೆ, ಎಸ್ಡಿಎಂಸಿ ಪಾತ್ರ ಏನು ಯಾರ ಒತ್ತಡ ಹಾಕಿದರು ಎಂಬುವುದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಬೇಕಿತ್ತು. ಕೇವಲ ಶಿಕ್ಷಕರ ವಿರುದ್ಧ ಕ್ರಮ ಏಕೆ ಎಂದು ಪ್ರಶ್ನಿಸಿದರು.
ಬೆಂಗಳೂರಿನ ಚಿಂತಕ ಎಂ.ನಿಖಿತರಾಜ್ ಮಾತನಾಡಿ, ಯಾವುದೆ ಸಮುದಾಯದ ಏಳಿಗೆ ಅಲ್ಲಿನ ಸಂಘಟನೆಯನ್ನು ಅವಲಂಭಿಸಿರುತ್ತದೆ. ಹಣ, ಬ್ಯಾಂಕ್ ಠೇವಣಿ ಇದ್ದ ಮಾತ್ರಕ್ಕೆ ಉನ್ನತ ಹುದ್ದೆ ಸಿಗಲಿದೆ ಎನ್ನುವ ಭ್ರಮೆಯಿಂದ ಹೊರಬರಬೇಕಿದೆ ಎಂದು ಹೇಳಿದರು.
ಶಾಸಕ ಬಸನಗೌಡ ದದ್ದಲ್, ವಿಧಾನ ಪರಿಷತ್ ಸದಸ್ಯ ಶರಣಪ್ಪ ಮಟ್ಟೂರು, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಿ.ಎಚ್.ಗೋನಾಳ, ಬೆಂಗಳೂರು ಕುರುಬ ಸಮಾಜದ ಪ್ರತಿನಿಧಿ ಪ್ರೇಮಲತಾ, ರಾಜ್ಯ ಕುರುಬ ಸಂಘದ ನಿರ್ದೇಶಕ ನೀಲಕಂಠ ಬೇವಿನ್ ಮಾತನಾಡಿದರು.
ವೀರಗೋಟದ ಕನಕ ಗುರುಪೀಠದ ಸಿದ್ಧರಾಮನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕೆಎಎಸ್ ಹುದ್ದೆಗೆ ಆಯ್ಕೆಯಾದ ಸಾಧಕರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಳನ್ನು ಸನ್ಮಾನಿಸಲಾಯಿತು.
ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟೇಶ ಜಾಲಿಬೆಂಚಿ ಅಧ್ಯಕ್ಷತೆ ವಹಿಸಿದ್ದರು. ಲಕ್ಷ್ಮಣತಾತಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಪಿಎಸ್ಐ ಲಿಂಗಣ್ಣ, ಸಿಡಾಕ್ನ ನಿರ್ದೇಶಕ ಜಿ.ಯು.ಹುಡೇದ್, ಕುರುಬರ ಸಂಘದ ನಿರ್ದೇಶಕರಾದ ಮಹಾದೇವಪ್ಪ ಮಿರ್ಜಾಪುರ, ಕಸ್ತೂರಮ್ಮ, ಪದಾಧಿಕಾರಿಗಳಾದ ನಾಗರಾಜ ಮರ್ಚೆಡ್, ನಾಗರಾಜ ಮಡ್ಡಿಪೇಟೆ, ನೌಕರರ ಸಂಘದ ಡಾ.ಶಾಮಣ್ಣ ಮಾಚನೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.