ಮಸ್ಕಿ: ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜುಲೈ 10ರಿಂದ ನೀರು ಬಿಡಲಾಗುತ್ತಿದ್ದು ಮಸ್ಕಿ ಸಮೀಪದ ಉಪ 55ನೇ ಉಪ ಕಾಲುವೆಯ ದುರಸ್ತಿ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಅಧಿಕಾರಿಗಳು ಗುತ್ತಿಗೆದಾರರಿಗೆ ಸೂಚಿಸಿದರು.
ಬುಧವಾರ ಸಮೀಪದ ಎಡದಂಡೆ ಕಾಲುವೆಯ 55 ನೇ ಉಪ ಕಾಲುವೆಯ ದುರಸ್ತಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
‘ಈಗಾಗಲೇ ಎಡದಂಡೆ ಕಾಲುವೆಗೆ ನೀರು ಬಿಡಲು ತಿರ್ಮಾನಿಸಲಾಗಿದೆ. ಆದರೆ, 55 ನೇ ಉಪ ಕಾಲುವೆ ಮೇಲೆ ದೊಡ್ಡ ಪ್ರಮಾಣದಲ್ಲಿ ಗುಂಡಿ ಬಿದ್ದಿದೆ. ಈಗಾಗಲೇ ಸಂಬಂಧಪಟ್ಟ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ, ದುರಸ್ತಿಗೆ ಬೇಕಾದ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿದೆ. ದುರಸ್ತಿ ಕಾಮಗಾರಿ ಬರದಿಂದ ಸಾಗಿದೆ. ಕಾಲುವೆ ನೀರು ಮಸ್ಕಿಗೆ ತಲುಪುವುದರ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರು ಬಿಡಲಾಗುವುದು. ಅಲ್ಲದೇ ಕಾಮಗಾರಿಯು ಗುಣಮಟ್ಟದಿಂದ ಕೂಡಿರಬೇಕು ಎಂದರು.
ನೀರಾವರಿ ನಿಗಮದ ಎಇಇ ದಾವುದ್, ಎಂಜನಿಯರ್ ಪ್ರದೀಪ್ ಲೋಕರೆ, ಶೇಖರಪ್ಪ ಮೇಟಿ ಹುಲ್ಲೂರು, ಶರಣಬಸವ ಸೊಪ್ಪಿಮಠ, ಕುಮಾರೆಪ್ಪ ಕಮತರ, ಕಂಟೆಪ್ಪ ನಾಯಕ, ಚಿಟ್ಟಿಬಾಬು, ಗೋವಿಂದಪ್ಪ ನಾಯಕ, ಡಾ.ವೆಂಕಟೇಶ್,
ಅಮರೇಗೌಡ ರತ್ನಾಪುರ, ಬಸಣ್ಣ ಚಟ್ನಿ, ರಮೇಶ್ ಸಂಕನಾಳ ಹಾಗೂ ದುರುಗ ಕ್ಯಾಂಪ್ ಸುಂಕನೂರು ಉದ್ಬಾಳ ರೈತ ಮುಖಂಡರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.