ಸಿಂಧನೂರು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕರ ವಾಹನ ಜಪ್ತಿ ಸಮಯದಲ್ಲಿ ನ್ಯಾಯಾಲಯದ ತಡೆಯಾಜ್ಞೆ ತಂದು ವಾಹನ ಬಿಡುಗಡೆಗೊಳಿಸಲಾಯಿತು
ಸಿಂಧನೂರು: ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಕಳೆದ 15 ವರ್ಷಗಳ ಹಿಂದೆ ನಿರ್ಮಿಸಿದ ಪ್ರಾಥಮಿಕ ಶಾಲಾ ಕಟ್ಟಡದ ಕಾಮಗಾರಿ ಬಿಲ್ ಅನ್ನು ಗುತ್ತಿಗೆದಾರರಿಗೆ ಪಾವತಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ವಾಹನ ಜಪ್ತಿಗೆ ಹಿರಿಯ ಶ್ರೇಣಿ ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ತಡೆಯಾಜ್ಞೆ ಪಡೆದ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?: ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ₹4 ಲಕ್ಷ ವೆಚ್ಚದಲ್ಲಿ ಶಾಲಾ ಕಟ್ಟಡ ನಿರ್ಮಿಸಲು ಪಂಚಾಯತ್ ರಾಜ್ ಇಲಾಖೆಯಿಂದ ಪ್ರಥಮ ದರ್ಜೆ ಗುತ್ತಿಗೆದಾರ ಚನ್ನಬಸಪ್ಪ ಪಂಪರೆಡ್ಡೆಪ್ಪ ಹತ್ತಿಗುಡ್ಡ ಗುತ್ತಿಗೆ ಪಡೆದಿದ್ದರು. ಕಾಮಗಾರಿ ಮುಗಿಸಿದ್ದರಿಂದ, ಬಿಲ್ ಪಾವತಿಸುವಂತೆ ಹನ್ನೊಂದು ವರ್ಷ ಇಲಾಖೆ ಕಚೇರಿಗೆ ಅಲೆದಾಡಿದರೂ ಬಿಲ್ ಬಿಡುಗಡೆ ಮಾಡಲು ಅಧಿಕಾರಿಗಳು ಸತಾಯಿಸಿದ ಕಾರಣ ಗುತ್ತಿಗೆದಾರರು ಕಾನೂನು ಮೊರೆ ಹೋಗಿದ್ದರು. ನ್ಯಾಯಾಲಯ ಬಾಕಿ ಮೊತ್ತ ₹2.12 ಲಕ್ಷಕ್ಕೆ ಬಡ್ಡಿಸೇರಿಸಿ ಒಟ್ಟು ₹8.22 ಲಕ್ಷ ಗುತ್ತಿಗೆದಾರರಿಗೆ ನೀಡಬೇಕು ಎಂದು ಮಾ.15ರಂದು ಆದೇಶ ಹೊರಡಿಸಿತ್ತು. ಆದರೂ ಅಧಿಕಾರಿಗಳು ಬಿಲ್ ಪಾವತಿಸಿದ್ದಿಲ್ಲ.
ಗುತ್ತಿಗೆದಾರ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಏರಿ ನ್ಯಾಯಾಲಯದ ಆದೇಶ ಉಲ್ಲಂಘನೆಯ ಗಮನ ಸೆಳೆದಿದ್ದರು. ಜು.10ರಂದು ನ್ಯಾಯಾಲಯ ಅಧಿಕಾರಿಗಳ ವಾಹನ ಜಪ್ತಿಗೆ ಆದೇಶಿಸಿತ್ತು. ಜು.15ರಂದು ಸಿಂಧನೂರಿನ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿಯಲ್ಲಿ ಗುತ್ತಿಗೆದಾರರ ಪರ ವಕೀಲ ಮಿಥುನ್ ಕುಮಾರ ಸಮ್ಮುಖದಲ್ಲಿ ನ್ಯಾಯಾಲಯದ ಸಿಬ್ಬಂದಿ ವಾಹನ ಜಪ್ತಿ ಸಮಯದಲ್ಲಿ ಅಧಿಕಾರಿಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ವಾಹನ ಬಿಡುಗಡೆಗೊಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.