
ರಾಯಚೂರು: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮನರೇಗಾ ಕಾಯ್ದೆ ಹಾಗೂ ಹಕ್ಕು ಸ್ವರೂಪವನ್ನು ತೆಗೆದುಹಾಕಿ ಕೇವಲ ಸರ್ಕಾರದ ಅಣತಿಯ ಯೋಜನೆಯಾಗಿ ಬದಲಾಯಿಸಿರುವುದನ್ನು ಖಂಡಿಸಿ ಹಾಗೂ ಅದನ್ನು ಹಿಂಪಡೆಯಲು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ (ಮಾರ್ಕ್ಸ್ವಾದಿ) ಜಿಲ್ಲಾ ಘಟಕದ ಪದಾಧಿಕಾರಿಗಳು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
2004-2005ರಲ್ಲಿ ಎಡಪಕ್ಷಗಳ ಬೆಂಬಲದ ಮೇಲೆ ಆಧಾರವಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆ ಜಾರಿಗೊಳಿಸಿತ್ತು. ಗ್ರಾಮೀಣ ಭಾಗದ ಕೃಷಿ ಕೂಲಿಕಾರರು, ಬಡ ರೈತರು ಹಾಗೂ ಇನ್ನಿತರ ಗ್ರಾಮೀಣ ದುಡಿಮೆಗಾರರು ಜೀವನೋಪಯಕ್ಕಾಗಿ ಇದನ್ನು ಅವಲಂಬಿದ್ದರು’ ಎಂದು ತಿಳಿಸಿದರು.
‘2025ರಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊಸದಾಗಿ ವಿಕಸಿತ ಭಾರತ ರೋಜಗಾರ್ ಮತ್ತು ಆಜೀವಿಕ ಮಿಷನ್ ಗ್ರಾಮೀಣ ಖಾತ್ರಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ಜಾರಿಗೊಳಿಸಿದೆ. ಹೊಸ ಕಾಯ್ದೆ ಕೂಲಿಕಾರರ ಮೇಲೆ ಹಲವು ದುಷ್ಪಪರಿಣಾಮಗಳನ್ನು ಉಂಟು ಮಾಡಲಿದೆ’ ಎಂದರು.
‘ಮನರೇಗಾ ಕಾಯ್ದೆಯಲ್ಲಿ ಯಂತ್ರಗಳ ಬಳಕೆಗೆ ಅವಕಾಶ ಇರಲಿಲ್ಲ. ಮಾನವ ದಿನಗಳ ಮೂಲಕ ಉದ್ಯೋಗ ಸೃಷ್ಟಿಸುವ ಕಾನೂನು ಇತ್ತು. ಈಗ ಈ ಹೊಸ ಕಾಯ್ದೆಯಲ್ಲಿ ಯಂತ್ರಗಳನ್ನು ಬಳಸಿ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ಅಂಶಗಳನ್ನು ಸೇರಿಸಲಾಗಿದೆ. ಅದ್ದರಿಂದ ಕೂಲಿಕಾರರಿಗೆ ಕೂಲಿಯ ದಿನಗಳು ಸಿಗದಂತಾಗಲಿದೆ’ ಎಂದು ಆತಂಕ ವ್ಯಕ್ತಪಡಿಸಿದರು.
‘ಕೇಂದ್ರ ಸರ್ಕಾರದ ಅನುಮೋದನೆ ಪಡೆದು ಈ ಯೋಜನೆಯಲ್ಲಿ ಕೆಲಸ ಕೊಡಬೇಕೆಂಬ ನಿಯಮಗಳು ಹಾಗೂ ಕೇಂದ್ರ ಸರ್ಕಾರ ಅಧಿಸೂಚಿತ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಾತ್ರವೇ ಉದ್ಯೋಗ ಖಾತರಿ ಜಾರಿ ಮಾಡಬಹುದು ಎಂಬ ಅಂಶಗಳು ಕೂಲಿಕಾರರ ಹಕ್ಕನ್ನು ಕಸಿದುಕೊಳ್ಳಲಿದೆ’ ಎಂದು ಹೇಳಿದರು.
‘ಕೇಂದ್ರ ಸರ್ಕಾರ 2005ರಲ್ಲಿ ಇರುವ ಕಾಯ್ದೆಯನ್ನು ಮುಂದುವರಿಸಬೇಕು’ ಎಂದು ಪ್ರಧಾನಮಂತ್ರಿ ಅವರಿಗೆ ಬರೆದ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವೀರೇಶ ಸೇರಿದಂತೆ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.