ADVERTISEMENT

ರಾಯಚೂರು: ‘ಕೃಷಿ ಭೂಮಿ ಹಾಳುವೆಡವಿದ ಕಿಡಿಗೇಡಿಗಳು’

ರಕ್ಷಣೆ ನೀಡಲು ಮಾನವ ಹಕ್ಕು, ಮಹಿಳಾ ಆಯೋಗಕ್ಕೆ ಎಸ್‌ಟಿ ಮಹಿಳೆಯರ ಮನವಿ

ಚಂದ್ರಕಾಂತ ಮಸಾನಿ
Published 21 ಜೂನ್ 2025, 4:51 IST
Last Updated 21 ಜೂನ್ 2025, 4:51 IST
ಮಾನ್ವಿ ತಾಲ್ಲೂಕಿನ ನೀರಮಾನ್ವಿಯ ಗ್ರಾಮದಲ್ಲಿ ಫಲವತ್ತಾದ ಭೂಮಿ ಅಗೆದ ಹಾಳು ಮಾಡಿರುವುದು
ಮಾನ್ವಿ ತಾಲ್ಲೂಕಿನ ನೀರಮಾನ್ವಿಯ ಗ್ರಾಮದಲ್ಲಿ ಫಲವತ್ತಾದ ಭೂಮಿ ಅಗೆದ ಹಾಳು ಮಾಡಿರುವುದು    

ರಾಯಚೂರು: ‘ಭೂಒಡೆತನ’ ಯೋಜನೆಯಡಿ ಜಿಲ್ಲೆಯ ಮಾನ್ವಿ ತಾಲ್ಲೂಕಿನ ನೀರಮಾನ್ವಿಯ ಪರಿಶಿಷ್ಟ ಪಂಗಡದ 16 ಮಹಿಳೆಯರಿಗೆ ಆರು ವರ್ಷಗಳ ಹಿಂದೆ ಸರ್ಕಾರ ಮಂಜೂರು ಮಾಡಿದ್ದ ಫಲವತ್ತಾದ ಭೂಮಿಯಲ್ಲಿ ಕೆಲ ಕಿಡಿಗೇಡಿಗಳು ಕೃಷಿ ಮಾಡಲು ಬಿಡದೆ ಅವರ ಬದುಕನ್ನು ನರಕವನ್ನಾಗಿ ಮಾಡಿದ್ದಾರೆ.

ಕೂಲಿ ಮಾಡಿ ಕಷ್ಟದ ಬದುಕು ಸಾಗಿಸುತ್ತಿದ್ದ ನೀರಮಾನ್ವಿಯ 16 ಮಹಿಳೆಯರ ಜೀವನಕ್ಕೆ ಆಸರೆಯಾಗಲು ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಖಾಸಗಿ ಜಮೀನು ಖರೀದಿಸಿ ಕೃಷಿ ಭೂಮಿ ಮಂಜೂರು ಮಾಡಿತ್ತು. ಜಮೀನು ಮಾಲೀಕತ್ವದ ಹಕ್ಕುಪತ್ರ ಸಿಕ್ಕಾಗ ಮಹಿಳೆಯರ ಸಂತಸಕ್ಕೆ ಪಾರವೇ ಇರಲಿಲ್ಲ. ಆದರೆ, ಈ ಸಂತಸ ಬಹಳ ದಿನ ಉಳಿಯಲಿಲ್ಲ.

ಈ ಫಲವತ್ತಾದ ಭೂಮಿಯಲ್ಲಿ ಕಿಡಿಗೇಡಿಗಳು ಜೆಸಿಬಿಯಿಂದ 30ರಿಂದ 35 ಅಡಿ ಆಳದವರೆಗೂ ಮಣ್ಣು ಅಗೆದು ಖಾಸಗಿಯವರಿಗೆ ಮಾರಾಟ ಮಾಡಿ ಹೊಲಗಳನ್ನೇ ಹಾಳು ಮಾಡಿದ್ದಾರೆ.

ADVERTISEMENT

‘ಜಾಗ ಮಂಜೂರು ಮಾಡಿದ ಅಧಿಕಾರಿಗಳಿಗೂ ಪಾಲು ಕೊಡಬೇಕಾಗಿದೆ ಎಂದು ಕೆಲ ಮರಿ ಪುಢಾರಿಗಳು ಫಲಾನುಭವಿ ಮಹಿಳೆಯರ ಕುಟುಂಬದ ಮೇಲೆ ಒತ್ತಡ ಹಾಕಿ ತಲಾ ₹70 ಸಾವಿರ ವಸೂಲಿ ಮಾಡಿದ್ದಾರೆ. ಜಮೀನು ಬಡ ಮಹಿಳೆಯರ ಹೆಸರಿಗೆ ಆಗಿದ್ದರೂ  ಬೇಸಾಯ ಮಾಡಲು ಬಿಡುತ್ತಿಲ್ಲ. ಭೂಮಿ ಅಗೆದು ಹೊಲ ಹಾಳು ಮಾಡಿದ್ದಾರೆ’ ಎಂದು ಫಲಾನುಭವಿಗಳಾದ ಲಕ್ಷ್ಮಿ ನಾಯಕ ಹಾಗೂ ಸಾರಮ್ಮ ನಾಯಕ ಅಳಲು ತೋಡಿಕೊಂಡಿದ್ದಾರೆ.

‘ಮಾನವ ಹಕ್ಕುಗಳ ಆಯೋಗ, ರಾಜ್ಯ ಮಹಿಳಾ ಆಯೋಗ, ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದೇವೆ. ನ್ಯಾಯದ ನಿರೀಕ್ಷೆಯಲ್ಲಿ ಇದ್ದೇವೆ’ ಎನ್ನುತ್ತಾರೆ ಗ್ರಾಮದ ವಾಲ್ಮೀಕಿ ಸಮುದಾಯದ ಮಹಿಳೆಯರು.

‘ನಮ್ಮ ಜಮೀನು ಬಿಟ್ಟುಕೊಡುವಂತೆ ಬೇಡಿಕೊಂಡ ಮಹಿಳೆಯರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಯಾರಿಗಾದರೂ ದೂರು ಕೊಡುವ ಮುಂಚೆ ನಿಮ್ಮ ಮನೆಯ ಗಂಡಸರ ಪ್ರಾಣ ಉಳಿಸಿಕೊಳ್ಳಿರಿ ಎಂದು ಬೆದರಿಕೆ ಹಾಕಿದ್ದಾರೆ’ ಎಂದು ಗ್ರಾಮಸ್ಥರು ದೂರುತ್ತಾರೆ. 

‘ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ ಗ್ರಾಮಕ್ಕೆ ಭೇಟಿ ನೀಡಿ ಇಲ್ಲಿನ ವಸ್ತುಸ್ಥಿತಿ ಅರಿತುಕೊಳ್ಳಬೇಕು. ಫಲವತ್ತಾದ ಭೂಮಿ ಹಾಳು ಮಾಡಿದವರಿಂದ ಪರಿಹಾರ ಕೊಡಿಸಬೇಕು. ಪರಿಶಿಷ್ಟ ಪಂಗಡದ 16 ಕುಟುಂಬಗಳಿಗೆ ರಕ್ಷಣೆ ಕೊಡಬೇಕು’ ಎಂದು ಮನವಿ ಮಾಡಿದ್ದಾರೆ.

ಮಾನ್ವಿ ತಾಲ್ಲೂಕಿನ ನೀರಮಾನ್ವಿಯ ಗ್ರಾಮದಲ್ಲಿ ಫಲವತ್ತಾದ ಭೂಮಿ ಅಗೆದ ಹಾಳು ಮಾಡಿರುವುದು
ಮಾನ್ವಿ ತಾಲ್ಲೂಕಿನ ನೀರಮಾನ್ವಿಗೆ ತೆರಳಿ ಅಲ್ಲಿನ ಸ್ಥಿತಿಗತಿಯನ್ನು ಪರಿಶೀಲಿಸಿ ದುರ್ಬಲ ಮಹಿಳೆಯರಿಗೆ ನ್ಯಾಯ ದೊರಕಿಸಲು ಪ್ರಯತ್ನಿಸಲಾಗುವುದು.
– ಮೋಹನದಾಸ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವ್ಯವಸ್ಥಾಪಕ
ನೀರಮಾನ್ವಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಬಡ ಮಹಿಳೆಯರಿಗೆ ನ್ಯಾಯ ಒದಗಿಸಿಕೊಡುತ್ತೇವೆ.
– ಬಸನಗೌಡ ದದ್ದಲ್, ಶ್ರೀಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಅಧ್ಯಕ್ಷ

₹ 1.34 ಕೋಟಿಗೆ 16 ಎಕರೆ ಜಮೀನು ಖರೀದಿ

ನೀರಮಾನ್ವಿ ಗ್ರಾಮದ ಸಣ್ಣಬಸಪ್ಪ ಅವರು ಸರ್ವೆ ನಂ.151ರಲ್ಲಿನ 16 ಎಕರೆ 8 ಗುಂಟೆ ಜಾಗವನ್ನು ₹30 ಲಕ್ಷಕ್ಕೆ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಇದೇ ಜಮೀನನ್ನು ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ₹1.34 ಕೋಟಿ ನೀಡಿ ಖರೀದಿಸಿತ್ತು. 2019–200ರಲ್ಲಿ ನಿಗಮವು ನೀರಮಾನ್ವಿಯ ಮಹಿಳೆಯರಿಗೆ ಜಮೀನು ಮಂಜೂರು ಮಾಡಿದೆ. ಹಕ್ಕುಪತ್ರ ವಿತರಿಸಿದ ನಂತರ ಮಹಿಳೆಯರ ಮೇಲೆ ದಬ್ಬಾಳಿಕೆ ಮಾಡಲು ಶುರುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.