ಕವಿತಾಳ: ಶನಿವಾರ ರಾತ್ರಿಯಿಡೀ ಸುರಿದ ಸತತ ಮಳೆಗೆ ಬಹುತೇಕ ಜಮೀನುಗಳಿಗೆ ನೀರು ನುಗ್ಗಿ ಬೆಳೆಗಳು ನಾಶವಾಗಿವೆ. ಹಳ್ಳಗಳು ತುಂಬಿ ಹರಿದ ಪರಿಣಾಮ ಕೆಲವು ಹಳ್ಳಿಗಳಲ್ಲ ಜನರು ಸಂಚಾರಕ್ಕೆ ತೊಂದರೆ ಅನುಭವಿಸುವಂತಾಗಿದೆ.
ಮಸ್ಕಿ ತಾಲ್ಲೂಕಿನ ತೋರಣದಿನ್ನಿ, ಮಲ್ಕಾಪುರ, ಮರಕಂದಿನ್ನಿ ಮತ್ತು ಉದ್ಬಾಳ ವರೆಗೆ ನೂರಾರು ಎಕರೆ ಪ್ರದೇಶಕ್ಕೆ ನೀರು ನುಗ್ಗಿದ್ದು ಭತ್ತದ ಬೆಳೆ ಬಹುತೇಕ ಹಾಳಾಗಿದೆ.
‘ಮಲ್ಕಾಪುರದ ಬಸವನ ಹಳ್ಳ ತುಂಬಿ ಹರಿದ ಪರಿಣಾಮ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಕೊಯ್ಲು ಮಾಡಿದ್ದ ಭತ್ತ ತೊಯ್ದು ಹಾಳಾಗಿದೆ. ಸತತ ಸುರಿಯುತ್ತಿರುವ ಮಳೆಯಿಂದ ನೆಲಕಚ್ಚಿದ ಭತ್ತ ಇದೀಗ ಗದ್ದೆಯಲ್ಲಿಯೇ ಮೊಳಕೆಯೊಡಿಯುತ್ತಿದೆ. ಇನ್ನೊಂದೆಡೆ ಕೊಯ್ಲು ಮಾಡಿದ್ದ ಭತ್ತದ ರಾಶಿ ಮಳೆಗೆ ತೊಯ್ದ ಕೊಳೆಯುತ್ತಿದೆ ಹೀಗಾಗಿ ಅಧಿಕ ನಷ್ಟ ಅನುಭವಿಸುಂತಾಗಿದೆ’ ಎಂದು ಮಲ್ಕಾಪುರ ಗ್ರಾಮದ ರೈತರಾದ ಬಸವರಾಜ ಬಾದರ್ಲಿ, ಭೀರಪ್ಪ, ಹನುಮಂತಪ್ಪ, ಭಾರೆಪ್ಪ ಸಾಹುಕಾರ ಮತ್ತು ಈರಣ್ಣ ತಳವಾರ ಅಳಲು ತೋಡಿಕೊಂಡರು.
ಆನಂದಗಲ್ ಗ್ರಾಮದ ಹತ್ತಿರ ಹಳ್ಳ ತುಂಬಿ ಸೇತುವೆ ಮೇಲೆ ನೀರು ನುಗ್ಗಿದ್ದು ರಸ್ತೆ ಕೊಚ್ಚಿ ಹೋಗಿದೆ ಹೀಗಾಗಿ ಸಂಚಾರಕ್ಕೆ ತೊಂದರೆಯಾಗಿದೆ.
‘ಅವೈಜ್ಞಾನಿಕವಾಗಿ ಸೇತುವೆ ನಿರ್ಮಿಸುತ್ತಿದ್ದು ಗುತ್ತಿಗೆದಾರರ ನಿರ್ಲಕ್ಷದಿಂದ ಹೊಲಗಳಿಗೆ ನುಗ್ಗಿದೆ ಅಪಾರ ಪ್ರಮಾಣದ ನೀರು ನುಗ್ಗಿ ಜೋಳ ಮತ್ತು ತೊಗರಿ ಬೆಳೆಗೆ ಹಾನಿಯಾಗಿದೆ’ ಎಂದು ವೀರಭದ್ರಪ್ಪ, ವೆಂಕಟೇಶ ಮತ್ತಿತರರು ಆರೋಪಿಸಿದರು.
ಇರಕಲ್ ಹಳ್ಳ ತಿಂಬಿ ಹರಿಯುತ್ತಿದ್ದು ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ ಎಂದು ಗ್ರಾಮದ ಶ್ರೀನಿವಾಸ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.