ಸಿಂಧನೂರು: ಮಳೆಯಿಂದಾಗಿ ಭತ್ತ ಸೇರಿದಂತೆ ಹತ್ತಿ, ಜೋಳ, ತೊಗರಿ, ಮೆಣಸಿನಕಾಯಿ, ಉಳ್ಳಾಗಡ್ಡಿ, ಕಡ್ಲಿ ಮುಂತಾದ ಬೆಳೆಗಳು ನಾಶಗೊಂಡಿವೆ. ರಾಜ್ಯ ಸರ್ಕಾರ ತ್ವರಿಗತಿಯಲ್ಲಿ ಸರ್ವೆ ಕಾರ್ಯ ನಡೆಸಿ ನಷ್ಟ ಹೊಂದಿದ ಎಲ್ಲಾ ರೈತರಿಗೂ ಸಮರ್ಪಕವಾಗಿ ಪರಿಹಾರ ನೀಡಬೇಕು ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಯ್ಲಿಗೆ ಬಂದ ಭತ್ತ ನೆಲಕ್ಕುರಳಿದ್ದು, ಎಕರೆಗೆ ₹ 30 ರಿಂದ ₹ 40 ಸಾವಿರ ಹಣ ಖರ್ಚು ಮಾಡಿದ ರೈತರು ಆತಂಕದಲ್ಲಿದ್ದಾರೆ. ತಾಲ್ಲೂಕಿನಲ್ಲಿ ಸುಮಾರು ಎರಡುವರೆ ಲಕ್ಷ ಜಮೀನು ಇದ್ದು ಅದರಲ್ಲಿ ಹೆಚ್ಚು ರೈತರು ಭತ್ತವನ್ನೇ ಬೆಳೆಯುತ್ತಾರೆ. ಈ ಬಾರಿ ಎಕರೆಗೆ 50 ಚೀಲ ಭತ್ತ ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ವರುಣನ ಅವಕೃಪೆಯಿಂದಾಗಿ ಬೆಳೆ ನೆಲಕ್ಕುರುಳಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದರು.
ಬೆಳೆ ಸರ್ವೆ ಕಾರ್ಯದ ವರದಿಯನ್ನು ನ.30 ರೊಳಗೆ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ. ಆದರೆ ಮಳೆ ಇನ್ನು ನಾಲ್ಕೈದು ದಿನ ಮುಂದುವರೆಯುವ ಲಕ್ಷಣಗಳಿದ್ದು, ವರದಿ ಪಡೆಯುವ ದಿನಾಂಕವನ್ನು ಮುಂದೂಡಬೇಕು. ವಿಮೆ ಮಾಡಿಸಿದ ರೈತರಿಗೆ ಪರಿಹಾರ ಕೊಡುವಾಗ ಷರತ್ತುಗಳನ್ನು ಸರಳಿಕರಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಕೊಲ್ಲಾ ಶೇಷಗಿರಿರಾವ್ ಮಾತನಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎನ್.ಶಿವನಗೌಡ ಗೊರೆಬಾಳ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಹನುಮೇಶ ಸಾಲಗುಂದಾ, ಮುಖಂಡರಾದ ಪರಮೇಶಪ್ಪ, ಹನುಮಂತಪ್ಪ ವಪ್ಪಲದಿನ್ನಿ, ಸೋಮನಾಥ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.