ADVERTISEMENT

ಭ್ರಷ್ಟಾಚಾರ, ಬೆಲೆ ಏರಿಕೆ ರಾಜ್ಯ ಸರ್ಕಾರದ ದೊಡ್ಡ ಸಾಧನೆ: ಸಿ.ಟಿ.ರವಿ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 7:16 IST
Last Updated 4 ಸೆಪ್ಟೆಂಬರ್ 2025, 7:16 IST
ಸಿ.ಟಿ.ರವಿ
ಸಿ.ಟಿ.ರವಿ   

ಸಿಂಧನೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಮಾಡಿರುವ ದೊಡ್ಡ ಸಾಧನೆಯೆಂದರೆ ಅದು ಭ್ರಷ್ಟಾಚಾರ ಮತ್ತು ಬೆಲೆ ಏರಿಕೆಯಾಗಿದೆ’ ಎಂದು ಬಿಜೆಪಿ ರಾಷ್ಟ್ರೀಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಟ್ಯಾಂಪ್‌ಡ್ಯೂಟಿ ಸೇರಿದಂತೆ 69 ಅಗತ್ಯ ವಸ್ತುಗಳ ಬೆಲೆಗಳನ್ನು ಹಲವು ಪಟ್ಟು ಹೆಚ್ಚಿಸಲಾಗಿದೆ. ಡಿಸಿಎಂ ಮತ್ತು ಸಿಎಂ ನಡುವೆ ಶೀತಲಸಮರ ನಡೆದಿದ್ದು, ರಾಜ್ಯದ ಅಭಿವೃದ್ಧಿ ಗಣನೀಯವಾಗಿ ಕುಸಿದಿದೆ. ಸಚಿವರು, ಶಾಸಕರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಯಾವ ಸಮಯದಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬ ಆತಂಕದಲ್ಲಿದ್ದಾರೆ. ಸರ್ಕಾರದ ಆಡಳಿತದ ವೈಖ್ಯರಿ ಬಗ್ಗೆ ಸ್ವತಃ ಸಚಿವರು ಮತ್ತು ಶಾಸಕರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ’ ಎಂದು ದೂರಿದರು.

ಧರ್ಮಸ್ಥಳದ ವಿರುದ್ಧ ಷಡ್ಯಂತ್ರ: ‘ಹಿಂದೂಗಳ ಧಾರ್ಮಿಕ ಶ್ರದ್ಧಾಕೇಂದ್ರವಾದ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಇರುವ ಅಪಾರ ಭಕ್ತಿ ಮತ್ತು ಶ್ರದ್ಧೆಗೆ ಭಂಗ ಮಾಡುವ ಷಡ್ಯಂತ್ರ ನಡೆದಿದೆ. ಹೆಗ್ಗಡೆ ಮತ್ತು ಅವರ ಕುಟುಂಬದ ಸದಸ್ಯರ ಯಾವುದೇ ಪಾತ್ರ ಕುರಿತು ಸೌಜನ್ಯ ಪ್ರಕರಣದಲ್ಲಿ ಎಲ್ಲೂ ನಮೂದಾಗಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಗ್ಗಡೆ ಬೇಕೋ, ಸೌಜನ್ಯಳಿಗೆ ನ್ಯಾಯ ಬೇಕೋ ಕೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಗಿರೀಶ್ ಮಟ್ಟಣ್ಣನವರ್ ಮತ್ತು ಅವರ ಗ್ಯಾಂಗ್‍ಗೆ ವಿದೇಶಿ ಹಣ ಬರುತ್ತಿದೆನ್ನುವ ಗುಮಾನೆ ಇದೆ. ಇದರಲ್ಲಿ ಮತಾಂತರ ಮಾಫಿಯಾ ಅಡಗಿದೆ’ ಎಂದು ಕಟುವಾಗಿ ಟೀಕಿಸಿದರು.

ADVERTISEMENT

‘ಭಾರತೀಯ ಜನತಾ ಪಾರ್ಟಿ ನ್ಯಾಯ, ಧರ್ಮ ಮತ್ತು ಧರ್ಮಸ್ಥಳದ ಕೋಟ್ಯಂತರ ಭಕ್ತರ ಪರವಾಗಿ ನಿಂತಿದೆ. ಇದರಲ್ಲಿ ಯಾವುದೇ ರಾಜಕೀಯ ಮಾಡುವ ಅಗತ್ಯವಿಲ್ಲ’ ಎಂದರು.

‘ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ವಿರುದ್ಧ ಯಾವುದೇ ಸಾಕ್ಷಿ ಇಲ್ಲದೆ ಮಹೇಶ ತಿಮ್ಮರೋಡಿ ಮಾತನಾಡಿದಾಗ ಮೌನವಾಗಿದ್ದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮುಖ್ಯಮಂತ್ರಿ ವಿರುದ್ಧ ಮಾತನಾಡಿದಾಗ ಒದ್ದು ಒಳಗೆ ಹಾಕುವಂತೆ ಆದೇಶಿಸುತ್ತಾರೆ. ಇದರಿಂದ ಹೆಗ್ಗಡೆಯವರ ಬಗ್ಗೆ ಕಾಂಗ್ರೆಸ್ಸಿಗರಿಗೆ ಇರುವ ಗೌರವ ಎಷ್ಟೆಂದು ಅರ್ಥವಾಗುತ್ತದೆ’ ಎಂದು ಟೀಕಿಸಿದರು.

ಬಾನು ಮುಷ್ತಾಕ್ ನೆಲದ ಸಂಸ್ಕೃತಿ ವಿರೋಧಿ: ‘ಕುಂಕುಮ, ಪೂಜೆ, ಭುವನೇಶ್ವರಿ ಈ ನೆಲದ ಸಂಸ್ಕೃತಿಯ ಭಾವನೆಗಳು. ಇದಕ್ಕೆ ಧಕ್ಕೆ ಬರುವಂತೆ ಮಾತನಾಡಿರುವ ಬಾನು ಮುಷ್ತಾಕ್ ಅವರನ್ನು ಕ್ಷಮೆ ಕೇಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಬಹುದಿತ್ತಲ್ಲ. ಅವರಿಗೆ ಸಂಸ್ಕೃತಿಗಿಂತ ವೋಟಿನ ರಾಜಕಾರಣವೇ ಮುಖ್ಯವಾಗಿದೆ’ ಎಂದು ಆಪಾದಿಸಿದರು.

‘ಭುವನೇಶ್ವರಿಗೆ ಕುಂಕುಮ ಹಚ್ಚಿ, ಪೂಜೆ ಮಾಡಿ ಕುಳ್ಳಿರಿಸುತ್ತಾರೆಂದು ಬಾನು ಮುಷ್ತಾಕ್ ಹೇಳುತ್ತಾರೆ. ಅದರ ಬದಲಾಗಿ ಬುರ್ಖಾ ಹಾಕಬೇಕೇನು?’ ಎಂದು ಕಿಡಿಕಾರಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರನಗೌಡ ಪಾಟೀಲ ಲೆಕ್ಕಿಹಾಳ, ಮುಖಂಡರಾದ ಡಾ.ಬಸವರಾಜ ಕ್ಯಾವಟರ್, ಕೆ.ಕರಿಯಪ್ಪ, ಕೊಲ್ಲಾ ಶೇಷಗಿರಿರಾವ್, ಎಂ.ದೊಡ್ಡಬಸವರಾಜ, ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ಯಂಕೋಬ ನಾಯಕ, ನಗರ ಮಂಡಲ ಅಧ್ಯಕ್ಷ ಸಿದ್ರಾಮೇಶ ಮನ್ನಾಪುರ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ವೀರಲಕ್ಷ್ಮಿ ಆದಿಮನಿ, ಮುಖಂಡ ಬಿ.ಶ್ರೀಹರ್ಷ, ಕೆ.ಹನುಮೇಶ, ಪ್ರೇಮಾ ಸಿದ್ದಾಂತಿಮಠ, ಜಯಶ್ರೀ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.