ADVERTISEMENT

ರಾಯಚೂರು | ದೌರ್ಜನ್ಯದಿಂದ ಮೃತಪಟ್ಟವರ ಅವಲಂಬಿತರಿಗೆ ಸ್ಪಂದಿಸಿ: ಜಿಲ್ಲಾಧಿಕಾರಿ

ಎಸ್‌ಸಿ, ಎಸ್‌ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 2:28 IST
Last Updated 5 ಅಕ್ಟೋಬರ್ 2025, 2:28 IST
ರಾಯಚೂರು ನಗರದಲ್ಲಿ ಶನಿವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್‌.ಕೆ ಮಾತನಾಡಿದರು
ರಾಯಚೂರು ನಗರದಲ್ಲಿ ಶನಿವಾರ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ನಿತೀಶ್‌.ಕೆ ಮಾತನಾಡಿದರು   

ರಾಯಚೂರು: ‘ದೌರ್ಜನ್ಯದಿಂದ ಮೃತಪಟ್ಟವರ ಅವಲಂಬಿತರಿಗೆ ಸರ್ಕಾರದಿಂದ ನಿಯಮಾನುಸಾರ ಕೆಲವು ಸೌಲಭ್ಯಗಳು ಸಿಗುತ್ತವೆ. ಬಹುತೇಕರಿಗೆ ಇದು ಗೊತ್ತಿಲ್ಲ. ಆದ್ದರಿಂದ ಆಯಾ ತಾಲ್ಲೂಕುಗಳ ಅಧಿಕಾರಿಗಳು ಅಂಥವರನ್ನು ಭೇಟಿ ಮಾಡಿ ಸ್ಪಂದಿಸಬೇಕು’ ಎಂದು ಜಿಲ್ಲಾಧಿಕಾರಿ ನಿತೀಶ್ ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಜಿಲ್ಲಾಮಟ್ಟದ ಜಾಗೃತಿ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು.

‘ಸಂತ್ರಸ್ಥರಿಗೆ ಪರಿಹಾರ ಮತ್ತು ಸರ್ಕಾರಿ ನೌಕರಿ ಸಿಗುತ್ತದೆ ಎಂಬುದಾಗಿ ಅಧಿಕಾರಿಗಳು ಮೃತರ ಕುಟುಂಬಸ್ಥರಿಗೆ ತಿಳಿಸಿ ಮನವರಿಕೆ ಮಾಡಿ ಅವರಿಗೆ ದಾಖಲೆ ಸಿದ್ದಪಡಿಸಲು, ಸಲ್ಲಿಸಲು ಮಾರ್ಗದರ್ಶನ ಮಾಡಬೇಕು. ಇಂಥ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ ವಿಳಂಬವಾಗದಂತೆ ಜಿಲ್ಲಾ ಪೊಲೀಸ್ ಇಲಾಖೆಯ ಜೊತೆಗೆ ಸಮನ್ವಯ ಮಾಡಬೇಕು. ಈ ಬಗ್ಗೆ ಸಮಿತಿಯಲ್ಲಿರುವ ಸದಸ್ಯರು ಸಹ ಗಮನ ಹರಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ದಾಖಲಾದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ವರದಿಯನ್ನು ‌ಪ್ರಾದೇಶಿಕ ಆಯುಕ್ತರಿಗೆ ಒಂದು ತಿಂಗಳೊಳಗೆ ಸಲ್ಲಿಸಬೇಕು’ ಎಂದು ತಾಕೀತು ಮಾಡಿದರು.

ಜಿಲ್ಲೆಯ ವಿವಿಧೆಡೆ ದಾಖಲಾದ ದೌರ್ಜನ್ಯ ಪ್ರಕರಣಗಳಲ್ಲಿ ಪರಿಹಾರ ವಿತರಣೆ ಮತ್ತು ಕೆಲ ಬಾಕಿ ಪ್ರಕರಣಗಳ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಭೆಗೆ ವಿವರಿಸಿದರು.

‘ನಗರ ಹೊರ ವಲಯದಲ್ಲಿ ನಿರ್ಮಾಣ ಹಂತದಲ್ಲಿರುವ ವಿಮಾನ ನಿಲ್ದಾಣದ ಬಳಿ ನಿರ್ಮಿಸಲಾಗುತ್ತಿರುವ ವಸತಿ ಸಮುಚ್ಛಯದಲ್ಲಿ ಒಂದು ಮನೆಗೆ ಒಟ್ಟು ₹9 ಲಕ್ಷ ರೂ ಖರ್ಚಾಗುತ್ತದೆ. ಈ ಪೈಕಿ ₹3 ಲಕ್ಷವನ್ನು ಸರ್ಕಾರವೇ ಭರಿಸುತ್ತದೆ. ಎಸ್‌ಸಿ, ಎಸ್‌.ಟಿ ಜನರು ಇಂಥ ವಸತಿ ಯೋಜನೆಯ ಲಾಭ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಎಸ್‌.ಸಿ, ಎಸ್‌.ಟಿ ಜನರಿಗೆ ಗುರುತಿಸಿದ ಸ್ಮಶಾನ ಜಾಗದ ಬಗ್ಗೆ ಸಮಿತಿ ಸದಸ್ಯ ರಘುವೀರ ನಾಯಕ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು.

‘ಸರ್ಕಾರ ಸ್ಮಶಾನಕ್ಕೆ ಗುರುತಿಸಿದ ಜಮೀನು ಒತ್ತುವರಿಯಾಗದಂತೆ ಆಯಾ ಕಡೆಗಳಲ್ಲಿ ಸದ್ಯಕ್ಕೆ ಕಾಂಪೌಂಡ್ ನಿರ್ಮಾಣಕ್ಕೆ ಕೂಡಲೇ ಕ್ರಮವಹಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಒಬಿಸಿ, ಎಸ್‌ಸಿ, ಎಸ್‌ಟಿ ಯಾರೇ ಇರಲಿ ನೌಕರಿ ಮತ್ತು ಇನ್ನಿತರ ಕೆಲಸಕ್ಕಾಗಿ ಕಾನೂನು ಬಾಹೀರವಾಗಿ ನಕಲಿ ಜಾತಿಪತ್ರ ಸಿದ್ಧಪಡಿಸಿ ಸಲ್ಲಿಸುವುದು ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಿ, ಜಾತಿ ಪರಿಶೀಲನಾ ಸಮಿತಿಯಲ್ಲಿಟ್ಟು ಪ್ರಾಥಮಿಕ ಹಂತದ ಪರಿಶೀಲನೆ ಬಳಿಕ ಸಂಬಂಧಿಸಿದ ವ್ಯಕ್ತಿಗಳ ಹೇಳಿಕೆ ದಾಖಲಿಸಲು ಅವರಿಗೆ ಕೋರ್ಟ್‌ಗೆ ಹಾಜರಾಗಲು ತಿಳಿಸಲು ಕ್ರಮ ವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಪಾತ್ರ, ಐಎಎಸ್ ಪ್ರೊಬೇಷನರಿ ಅಧಿಕಾರಿ ಪುರುರಾಜ್ ಸಿಂಗ್, ನಾಮನಿರ್ದೇಶಿತ ಸದಸ್ಯರಾದ ರವೀಂದ್ರ ಜಲ್ದಾರ್, ಕೆ.ಇ.ಕುಮಾರ, ಹೇಮರಾಜ ಅಸ್ಕಿಹಾಳ, ರವಿಕುಮಾರ ಅಸ್ಕಿಹಾಳ, ಎನ್.ರಘುವೀರ ನಾಯಕ, ಪವನ್ ಕಿಶೋರ ಪಾಟೀಲ, ಬಸವರಾಜ ನಕ್ಕುಂದಿ, ಟಿ.ಸುಧಾಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.