
ರಾಯಚೂರು: ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ವತಿಯಿಂದ ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗ ಮಂದಿರದಲ್ಲಿ ಎರಡು ದಿನಗಳ ವರೆಗೆ ಅಚ್ಚುಕಟ್ಟಾಗಿ ನಡೆದ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿತು. ನೂರಾರು ದಲಿತ ಸಾಹಿತಿಗಳು, ಕವಿಗಳು ಹಾಗೂ ಸಾಹಿತ್ಯಾಸಕ್ತರು ಸಮ್ಮೇಳನಕ್ಕೆ ಸಾಕ್ಷಿಯಾದರು.
ಯಾವುದೇ ಗೌಜು ಗದ್ದಲ, ವಿವಾದಗಳಿಗೆ ಆಸ್ಪದ ಮಾಡಿಕೊಡದೇ ಎರಡು ದಿನಗಳ ವರೆಗೆ ಸರಳವಾಗಿ ನಡೆಯಿತು. ಸಮಾಜ ಕಲ್ಯಾಣ ಇಲಾಖೆಯ ಭವನದಲ್ಲಿ ಸಾರ್ವಜನಿಕರಿಗೆ ಊಟ ಹಾಗೂ ಉಪಾಹಾರದ ವ್ಯವಸ್ಥೆ ಮಾಡಿದ್ದರಿಂದ ಹೊರ ಜಿಲ್ಲೆಗಳಿಂದ ಬಂದಿದ್ದ ಸಾಹಿತ್ಯ ಆಸಕ್ತರಿಗೂ ಯಾವುದೇ ರೀತಿಯ ಸಮಸ್ಯೆ ಎದುರಾಗಲಿಲ್ಲ.
ವಾಹನ ನಿಲುಗಡೆಗೂ ಸರಿಯಾದ ವ್ಯವಸ್ಥೆ ಮಾಡಿದ್ದರಿಂದ ಸಂಚಾರ ಒತ್ತಡ ಕಂಡು ಬರಲಿಲ್ಲ. ಪೊಲೀಸ್ ಅಧಿಕಾರಿಗಳು ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರಿಂದ ಪಾರ್ಕಿಂಗ್ ಸಮಸ್ಯೆ ಕಾಡಲಿಲ್ಲ. ಸಮ್ಮೇಳನದ ಹಿನ್ನೆಲೆಯಲ್ಲಿ ರಿಯಾಯಿತಿ ಘೋಷಿಸಿದ್ದರಿಂದ ಸಾಹಿತ್ಯಾಸಕ್ತರು ಅನೇಕ ಪುಸ್ತಕಗಳನ್ನು ಖರೀದಿಸಿ ಮನೆಗಳತ್ತ ಹೆಜ್ಜೆ ಹಾಕಿದರು.
ಸಮ್ಮೇಳನದ ಸಮಾರೋಪ ಸಮಾರಂಭದ ನೇತೃತ್ವನ್ನು ಬೀದರ್ನ ಬೌದ್ಧ ವಿಹಾರದ ವರಜ್ಯೋತಿ ಭಂತೇಜಿ ವಹಿಸಿದ್ದರು.. ಸರ್ವಾಧ್ಯಕ್ಷತೆ ಸಾಹಿತಿ ಜಯದೇವಿ ಗಾಯಕವಾಡ ಮಾತನಾಡಿದರು. ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಅರ್ಜುನ ಗೊಳಸಂಗಿ ಅಧ್ಯಕ್ಷತೆ ವಹಿಸಿದ್ದರು.
ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ, ಡಿಎಸ್ಎಸ್ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ ಸಮಾರೋಪ ಭಾಷಣ ಮಾಡಿದರು.
ಸಾಧಕರಿಗೆ ಸನ್ಮಾನ: ಸಮಾರೋಪ ಸಮಾರಂಭದಲ್ಲಿ 64 ಸಾಧಕರು ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು. ಸಮ್ಮೇಳನಾಧ್ಯಕ್ಷೆ ಜಯದೇವಿ ಗಾಯಕವಾಡ ಹಾಗೂ ಗವಿಸಿದ್ದಪ್ಪ ಪಾಟೀಲ ದಂಪತಿಯನ್ನು ಪರಿಷತ್ತಿನ ವತಿಯಿಂದ ಸತ್ಕರಿಸಲಾಯಿತು.
ಚಿಕ್ಕಮಗಳೂರಿನ ಭಕ್ತನಕಟ್ಟೆ ಲೋಕೇಶ ಹೋರಾಟದ ಗೀತೆ, ಹಾವೇರಿಯ ಕಾವೇರಿ ಹೊನ್ನತ್ತಿ ಹಾಗೂ ಸಂಗಡಿಗರು ಸಮತಾ ಗೀತೆ, ರಾಯಚೂರಿನ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ, ಗದಗನ ಕೃಷ್ಣಾ ಮೆಲೊಡಿಯಸ್ ಹಾಗೂ ಬೆಂಗಳೂರಿನ ಭೀಮಜಿ ಕೃಷ್ಣಮೂರ್ತಿ ಕಲಾ ತಂಡದ ಕಲಾವಿದರು ಅಂಬೇಡ್ಕರ್ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನ ರಂಜಿಸಿದರು.
ಅತಿಥಿಗಳಾಗಿ ಅಮರೇಶ ಬಲ್ಲಿದವ, ಶಾಂತವೀರ, ಹಾಲಬಸಪ್ಪ ಪೂಜೇರಿ, ಡಿ.ಎಚ್.ಪೂಜಾರ, ಚಿದಾನಂದಪ್ಪ ಕುರಿ, ಮಹೇಶ ಎ.ಇ, ಚಂದ್ರಶೇಖರ ಭೇರಿ, ರವೀಂದ್ರ ಜಲ್ದಾರ್ ಹಾಗೂ ವಿಜಯೇಂದ್ರ, ದಸಾಪ ಜಿಲ್ಲಾ ಘಟಕದ ಅಧ್ಯಕ್ಷ ತಾಯರಾಜ ಮರ್ಚಟ್ಹಾಳ, ಪರಿಷತ್ತಿನ ಪದಾಧಿಕಾರಿಗಳಾದ ಎಚ್.ಬಿ.ಕೋಲ್ಕಾರ್, ವೈಎಂ.ಭಜಂತ್ರಿ, ಚಂದ್ರಗುಪ್ಪ, ಸುಜಾತಾ ಚಲವಾದಿ, ಗಣಪತಿ ಚಲವಾದಿ, ಗಾಂಧೀಜಿ ಮೊಳಕೇರಿ. ಹುಸೇನಪ್ಪ ಅಮರಾಪುರ, ಕರಿಗೂಳಿ ಸಂಕೇಶ್ವರ, ಶರಣಪ್ಪ ಚಲವಾದಿ, ಪಾರ್ಥ ಸಿರವಾರ, ಶಾಂತಾ ಆಂಜನೇಯ ಉಪಸ್ಥಿತರಿದ್ದರು.
ಬಸವರಾಜ ಸುಂಕೇಶ್ವರ ಸ್ವಾಗತಿಸಿದರು. ರಾಘವೇಂದ್ರ ಚೌಡಕಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.