ರಾಯಚೂರು: ತಾಲ್ಲೂಕಿನ ಆತ್ಕೂರು ಹಾಗೂ ಕೂರ್ವಕುಲ ಸರಹದ್ದಿನ ಕೃಷ್ಣ ನದಿಯ ನಡುಗಡ್ಡೆ ಪ್ರದೇಶಗಳಲ್ಲಿನ ಸ್ಥಿತಿಗತಿಗಳು, ದೋಣಿಗಳ ಸಿದ್ದತೆ, ಪ್ರವಾಹ ಉಂಟಾದಲ್ಲಿ ಜನ, ಜಾನುವಾರುಗಳನ್ನು ರಕ್ಷಿಸಲು ಕೈಗೊಳ್ಳಲಾಗಿರುವ ಪೂರ್ವ ಸಿದ್ದತಾ ಕ್ರಮಗಳನ್ನು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹಾಗೂ ತಂಡದವರು ಬುಧವಾರ ಭೇಟಿ ನೀಡಿ ಪರಿಶೀಲಿಸಿದರು.
ನದಿಯಲ್ಲಿ ಪ್ರವಾಹ ಸ್ಥಿತಿ ಉದ್ಬವವಾದಲ್ಲಿ ಮುಂಜಾಗ್ರತಾ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಗ್ರಾಮದಲ್ಲಿ ಪರಿಶೀಲಿಸಿದರು, ಗ್ರಾಮಸ್ಥರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ಆತ್ಕೂರು, ಕೂರ್ವಕುಲ ಹಾಗೂ ಕುರ್ವಕುಂದದ ಗ್ರಾಮಸ್ಥರು ಅತ್ಯಂತ ಎಚ್ಚರಿಕೆಯಿಂದ ಇರಬೇಕು, ನಡುಗಡ್ಡೆಯಲ್ಲಿರುವ ಗ್ರಾಮಸ್ಥರ ಆರೋಗ್ಯವನ್ನು ಮತ್ತೊಮ್ಮೆ ತಪಾಸಣೆ ನಡೆಸಬೇಕು, ಕೆಮ್ಮು, ಜ್ವರ, ನೆಗಡಿ, ಇತ್ಯಾದಿ ಕಾಯಿಲೆಗಳಿದ್ದರೆ ಕೂಡಲೇ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಥವಾ ಗ್ರಾಮ ಲೆಕ್ಕಿಗರ ಗಮನಕ್ಕೆ ತರಬೇಕು ಎಂದು ತಿಳಿಸಿದರು.
ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು, ರೋಗಿಗಳಿದ್ದರೆ ಅಗತ್ಯ ಔಷಧಿ ವಿತರಿಸಬೇಕು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಮಾತನಾಡಿ, ನದಿಯಲ್ಲಿ ಹಾಕಿರುವ ಎಲ್ಲ ಪಂಪ್ಸೆಟ್ಗಳನ್ನು ಕೂಡಲೇ ತೆರವುಗೊಳಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ, ತಹಶೀಲ್ದಾರ್ ಡಾ.ಹಂಪಣ್ಣ, ಅಗ್ನಿಶಾಮಕ ದಳದ ಅಧಿಕಾರಿ ರವೀಂದ್ರ, ಉಪ ತಹಶೀಲ್ದಾರ್ ವೇಣುಮಾಧವ, ಆರ್.ಐ ಸಿ.ರಾಮು, ವಿಎ. ಸುರೇಶ, ಪಂಚಾಯತ್ ಅಭಿವೃದ್ದಿ ಅಧಿಕಾರಿ ರಮಾದೇವಿ, ಯಾಪಲದಿನ್ನಿ ಪೊಲೀಸ್ ಠಾಣೆ ಪಿಎಸ್ಐ ಕರೆಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.