ಸಿಂಧನೂರು: ‘ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕನಿಷ್ಠ ವೇತನ ಕಾಯ್ದೆಯಡಿ ಪರಿಗಣಿಸಬೇಕು’ ಎಂದು ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜಯಮ್ಮ ಆಗ್ರಹಿಸಿದರು.
ನಗರದ ಸ್ತ್ರೀಶಕ್ತಿ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ವೃತ್ತ ಪದಾಧಿಕಾರಿಗಳ ಜಿಲ್ಲಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೌಕರರ ಗೌರವಧನ ಹೆಚ್ಚಿಸಿಲ್ಲ. ಆಹಾರ ಧಾನ್ಯದ ವೆಚ್ಚ ಸಹ ಹೆಚ್ಚಿಸದೆ ಐಸಿಡಿಎಸ್ ಯೋಜನೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ’ ಎಂದು ಆರೋಪಿಸಿದರು.
‘ಫಲಾನುಭವಿಗಳ ಮನೆಗೆ ಪೂರಕ ಪೌಷ್ಟಿಕ ಆಹಾರ ತಲುಪಿಸಲು ಅವರ ಮುಖ ಛಾಯಾಚಿತ್ರ ಮೊಬೈಲ್ನಲ್ಲಿ ಸೆರೆ ಹಿಡಿಯುವಂತೆ ಇಲಾಖೆ ಆದೇಶ ನೀಡಿದೆ. ಆದರೆ ಮೊಬೈಲ್ ಸಮಸ್ಯೆ, ನೆಟ್ವರ್ಕ್ ಸೇರಿದಂತೆ ಹಲವಾರು ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ. ಆದ್ದರಿಂದ ಈ ನಿಯಮವನ್ನು ಸಡಿಲಗೊಳಿಸಬೇಕು’ ಎಂದು ಒತ್ತಾಯಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷೆ ಸುಲೋಚನಾ, ಕಾರ್ಯದರ್ಶಿ ಲಲಿತಾ, ಲಿಂಗಸುಗೂರು ತಾಲ್ಲೂಕು ಘಟಕದ ಅಧ್ಯಕ್ಷೆ ಶ್ಯಾವಮ್ಮ, ಸಿಂಧನೂರು ಘಟಕದ ಅಧ್ಯಕ್ಷೆ ಗಿರಿಜಮ್ಮ, ಸಿರವಾರ ಅಧ್ಯಕ್ಷೆ ಮಂಗಮ್ಮ, ಮಸ್ಕಿ ಅಧ್ಯಕ್ಷೆ ಲೀಲಾವತಿ, ತುರ್ವಿಹಾಳ ಯೋಜನೆಯ ನಾಗರತ್ನ, ಮಾನ್ವಿಯ ಚೆನ್ನಮ್ಮ, ಎಐಟಿಯುಸಿ ಮುಖಂಡರಾದ ಬಾಷುಮಿಯಾ, ಚಂದ್ರಶೇಖರ ಕ್ಯಾತ್ನಟ್ಟಿ, ತಿಪ್ಪಯ್ಯಶೆಟ್ಟಿ, ಸಿದ್ದರಾಮೇಶಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.