ADVERTISEMENT

ಮಾನ್ವಿ ಕ್ಷೇತ್ರದಲ್ಲಿ ಶಿವನಗೌಡ ನಾಯಕ ಜನ್ಮದಿನ ಆಚರಣೆ: ರಾಜಕೀಯ ವಲಯದಲ್ಲಿ ಚರ್ಚೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2022, 5:20 IST
Last Updated 14 ಜುಲೈ 2022, 5:20 IST
ಶಾಸಕ ಶಿವನಗೌಡ ಜನ್ಮದಿನಾಚರಣೆ
ಶಾಸಕ ಶಿವನಗೌಡ ಜನ್ಮದಿನಾಚರಣೆ   

ರಾಯಚೂರು: ದೇವದುರ್ಗ‌ ಶಾಸಕ‌ ಶಿವನಗೌಡ ನಾಯಕ ಅವರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಪಕ್ಕದ ವಿಧಾನಸಭೆ ಕ್ಷೇತ್ರ ಮಾನ್ವಿಯಲ್ಲಿ ಗುರುವಾರ ಆಯೋಜಿಸಲಾಗಿದೆ.

ಶಿವನಗೌಡ ನಾಯಕ ಅಭಿಮಾನಿಗಳ ಬಳಗವು ಕಾರ್ಯಕ್ರಮ ಆಯೋಜಿಸಿದ್ದು, ಮಾನ್ವಿ ಪಟ್ಟಣದ ಟಿಎಪಿಸಿಎಂಎಸ್ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ‌ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ‌ ಶಂಕರ ಪಾಟೀಲ‌ ಮುನೇನಕೊಪ್ಪ, ವಸತಿ ಸಚಿವ ವಿ.ಸೋಮಣ್ಣ, ಸಾರಿಗೆ ಸಚಿವ ಶ್ರೀರಾಮುಲು, ಬಿಜೆಪಿ ಮುಖಂಡರು ಸೇರಿದಂತೆ 500 ಕ್ಕೂ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ.

ಕೋವಿಡ್ ಮಹಾಮಾರಿ ಸಂದರ್ಭದಲ್ಲೂ ಶಾಸಕ ಶಿವನಗೌಡ ಅವರು ದೇವದುರ್ಗ ಮತ್ತು ಮಾನ್ವಿ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ಒಂದು ತಿಂಗಳು ಆಹಾರದ ಪೊಟ್ಟಣಗಳನ್ನು ಪ್ರತಿ ಗ್ರಾಮಗಳಲ್ಲಿ ವಿತರಿಸುವ ವ್ಯವಸ್ಥೆ ಮಾಡಿದ್ದರು.

ಇದೇ ಮೊದಲ ಸಲ ದೊಡ್ಡ ಪ್ರಮಾಣದಲ್ಲಿ 45ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಶಿವನಗೌಡ ನಾಯಕ ಅವರು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರ ಮಾನ್ವಿಯಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರ ತೊರೆದು ಮಾನ್ವಿ ಕ್ಷೇತ್ರದಲ್ಲಿ ಶಿವನಗೌಡ ಸ್ಪರ್ಧಿಸುತ್ತಾರೆ ಅಥವಾ ಸಂಬಂಧಿಕರೊಬ್ಬರಿಗೆ ಮಾನ್ವಿ ಕ್ಷೇತ್ರದ ಟಿಕೆಟ್ ಕೊಡಿಸುತ್ತಾರೆ ಎನ್ನುವ ವಿಷಯಗಳು ಪ್ರಸ್ತಾಪಕ್ಕೆ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.