ADVERTISEMENT

ರಾಯಚೂರು: ದೇವದುರ್ಗ ಶಾಸಕರ ನಿಧಿ ದೇವಸ್ಥಾನ ನಿರ್ಮಾಣಕ್ಕೆ ಬಳಕೆ

2021–22 ನೇ ಸಾಲಿಗೆ ಪ್ರತಿ ಕ್ಷೇತ್ರಕ್ಕೂ ₹1 ಕೋಟಿ ಅನುದಾನ ಬಿಡುಗಡೆ

ನಾಗರಾಜ ಚಿನಗುಂಡಿ
Published 13 ಅಕ್ಟೋಬರ್ 2021, 14:29 IST
Last Updated 13 ಅಕ್ಟೋಬರ್ 2021, 14:29 IST
ದೇವದುರ್ಗ ತಾಲ್ಲೂಕಿನ ಕರಡಿಗುಡ್ಡ–ಬಾಗೂರ ಗ್ರಾಮಗಳ ಮಧ್ಯೆ ಕಾಮಗಾರಿವೊಂದಕ್ಕೆ 2018 ರಲ್ಲಿ ಭೂಮಿಪೂಜೆ ನೆರವೇರಿಸಿದ್ದ ಶಾಸಕ ಶಿವನಗೌಡ ನಾಯಕ (ಫೈಲ್‌ ಚಿತ್ರ)
ದೇವದುರ್ಗ ತಾಲ್ಲೂಕಿನ ಕರಡಿಗುಡ್ಡ–ಬಾಗೂರ ಗ್ರಾಮಗಳ ಮಧ್ಯೆ ಕಾಮಗಾರಿವೊಂದಕ್ಕೆ 2018 ರಲ್ಲಿ ಭೂಮಿಪೂಜೆ ನೆರವೇರಿಸಿದ್ದ ಶಾಸಕ ಶಿವನಗೌಡ ನಾಯಕ (ಫೈಲ್‌ ಚಿತ್ರ)   

ರಾಯಚೂರು: ರಾಜ್ಯದಲ್ಲೇ ಅತಿ ಹಿಂದುಳಿದ ತಾಲ್ಲೂಕು ಎನ್ನುವ ಅಪಖ್ಯಾತಿ ದೇವದುರ್ಗ ತಾಲ್ಲೂಕಿನದ್ದಾಗಿದೆ. ಈ ವಿಧಾನಸಭೆ ಕ್ಷೇತ್ರಕ್ಕೆ 2018 ರಲ್ಲಿ ಬಿಜೆಪಿ ಶಾಸಕರಾಗಿ ಆಯ್ಕೆಯಾದ ಶಿವನಗೌಡ ನಾಯಕ ಅವರಿಗೆ ರಾಜ್ಯ ಸರ್ಕಾರವು ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ₹2 ಕೋಟಿ ಪ್ರತಿವರ್ಷ ಒದಗಿಸಿದೆ. ಶಾಸಕರು ಬಹುತೇಕ ನಿಧಿಯನ್ನು ದೇವಸ್ಥಾನದ ನಿರ್ಮಾಣಕ್ಕಾಗಿ ಬಳಕೆ ಮಾಡುತ್ತಾ ಬರುತ್ತಿರುವುದು ಗಮನಾರ್ಹ.

2017–18ನೇ ಸಾಲಿನಿಂದ ಇದುವರೆಗೂ ನಾಲ್ಕು ವರ್ಷಗಳಲ್ಲಿ ಒಟ್ಟು ₹8 ಕೋಟಿ ಶಾಸಕರ ನಿಧಿಯನ್ನು ಸರ್ಕಾರ ಒದಗಿಸಿದೆ. ಒಟ್ಟು ಅನುದಾನದಲ್ಲಿ ದೇವಸ್ಥಾನಗಳ ನಿರ್ಮಾಣ, ಮಸೀದಿ ನಿರ್ಮಾಣ ಹಾಗೂ ಸಮುದಾಯ ಭವನ ನಿರ್ಮಾಣ ಸೇರಿ ಒಟ್ಟು 165 ಕಾಮಗಾರಿಗಳಿಗೆ ಶಾಸಕರು ತಮ್ಮ ಕ್ಷೇತ್ರ ಅಭಿವೃದ್ಧಿ ನಿಧಿಯನ್ನು ಹಂಚಿಕೆ ಮಾಡಿದ್ದಾರೆ. ಅದರಲ್ಲಿ ಇದುವರೆಗೂ ₹6.93 ಕೋಟಿ ಬಿಡುಗಡೆ ಮಾಡಲಾಗಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ದೇವದುರ್ಗ ವಿಧಾನಸಭೆ ಕ್ಷೇತ್ರದಾದ್ಯಂತ ಒಟ್ಟು 151 ದೇವಸ್ಥಾನಗಳ ವಿವಿಧ ನಿರ್ಮಾಣ ಕಾಮಗಾರಿಗೆ ಅನುದಾನ ಒದಗಿಸಿದ್ದಾರೆ. ಅದರಲ್ಲಿ ದೇವಸ್ಥಾನದ ಮುಂದುವರಿದ ಕಾಮಗಾರಿಗಳು ಸೇರ್ಪಡೆಯಾಗಿವೆ. ಹಿರೇರಾಯನಕುಂಪಿ ಮಸೀದಿಗೆ ₹4 ಲಕ್ಷ, ಹುನೂರು ಗ್ರಾಮದ ಮಸೀದಿಗೆ ₹1 ಲಕ್ಷ ಸೇರಿ ಮೂರು ಗ್ರಾಮಗಳಿಗೆ ಮಸೀದಿ ನಿರ್ಮಾಣಕ್ಕೂ ಶಾಸಕರ ನಿಧಿ ಒದಗಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ದೇವದುರ್ಗ ಪಟ್ಟಣದಲ್ಲಿ ಏಕೈಕ ಶಾಲಾ ಕೊಠಡಿ ನಿರ್ಮಾಣಕ್ಕೆ ₹5 ಲಕ್ಷ ಒದಗಿಸಿದ್ದಾರೆ. ವಿವಿಧೆಡೆ ಎಂಟು ಸಮುದಾಯ ಭವನ ಕಟ್ಟಡಗಳಿಗೆ ಒಟ್ಟು ₹22 ಲಕ್ಷ ಅನುದಾನ ಕೊಟ್ಟಿದ್ದರೆ, ದೇವದುರ್ಗದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹50 ಲಕ್ಷ ಅನುದಾನ ಒದಗಿಸಿರುವುದು ವಿಶೇಷ.

ADVERTISEMENT

2017–18ನೇ ಸಾಲಿನ ₹2 ಕೋಟಿ ಶಾಸಕರ ನಿಧಿಯನ್ನು ₹1.18 ಕೋಟಿ ದೇವಸ್ಥಾನಗಳ ಕಾಮಗಾರಿಗೆ, ₹17 ಲಕ್ಷ ಸಮುದಾಯ ಭವನಗಳ ಕಾಮಗಾರಿಗೆ, ₹5 ಲಕ್ಷ ಶಾಲಾ ಕೊಠಡಿ ನಿರ್ಮಾಣಕ್ಕಾಗಿ, ₹5 ಲಕ್ಷ ಮಸೀದಿ ನಿರ್ಮಾಣಕ್ಕಾಗಿ, ₹50 ಲಕ್ಷ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಹಾಗೂ ₹5 ಲಕ್ಷ ಮಠದ ಕಾಮಗಾರಿಗೆ ಶಾಸಕರು ಹಂಚಿಕೆ ಮಾಡಿದ್ದಾರೆ. ಒಟ್ಟು 35 ಕಾಮಗಾರಿಗಳಿಗೆ ಅನುದಾನ ಒದಗಿಸಿದ್ದು, ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ.

2018–19ನೇ ಸಾಲಿನಲ್ಲಿ ಶಾಸಕರ ನಿಧಿ ₹2 ಕೋಟಿಯಲ್ಲಿ, ₹1.98 ಕೋಟಿ ವಿವಿಧ ದೇವಸ್ಥಾನಗಳ ಕಾಮಗಾರಿಗಳಿಗೆ ಹಾಗೂ ₹2 ಲಕ್ಷ ಅನುದಾನವನ್ನು ಸಮುದಾಯ ಭವನಕ್ಕೆ ಹಂಚಿಕೆ ಮಾಡಿದ್ದಾರೆ. ಇದುವರೆಗೂ ಒಟ್ಟು ₹182 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ. 2019–20ನೇ ಸಾಲಿನಲ್ಲಿ ₹1.91 ಕೋಟಿ ಅನುದಾನವನ್ನು ದೇವಸ್ಥಾನಗಳ ಕಾಮಗಾರಿಗಳಿಗೆ, ₹4 ಲಕ್ಷ ಮಸೀದಿಗೆ ಹಾಗೂ ₹5 ಲಕ್ಷ ಸಮುದಾಯ ಭವನಕ್ಕೆ ಶಾಸಕರು ಒದಗಿಸಿದ್ದಾರೆ. ಒಟ್ಟು 37 ಕಾಮಗಾರಿಗಳನ್ನು ಮಾಡಲಾಗಿದೆ.

2020–21ನೇ ಸಾಲಿನ ₹2 ಕೋಟಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ₹1.92 ಕೋಟಿ ಅನುದಾನ ದೇವಸ್ಥಾನಗಳಿಗೆ ಹಾಗೂ ₹8 ಲಕ್ಷ ಸಮುದಾಯ ಭವನಕ್ಕೆ ಹಂಚಿಕೆ ಮಾಡಿದ್ದಾರೆ. ಇದುವರೆಗೂ ₹1.41 ಕೋಟಿ ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ.

ಶಾಸಕರ ನಿಧಿಯಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳ ಉಸ್ತುವಾರಿಯನ್ನು ಪಂಚಾಯತ್‌ರಾಜ್‌ ಇಲಾಖೆ ವಹಿಸಿಕೊಂಡು ಕೆಲಸ ಮಾಡಿಸಿದೆ. ಯುಸಿ ನೀಡುವುದು ಬಹುತೇಕ ಕಾಮಗಾರಿಗಳದ್ದು ಬಾಕಿ ಇದೆ. 2021–22ನೇ ಸಾಲಿಗಾಗಿ ರಾಜ್ಯ ಸರ್ಕಾರವು ಈಗಾಗಲೇ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ₹1 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆದರೆ, ಶಾಸಕರು ಇನ್ನೂ ಅನುದಾನ ಹಂಚಿಕೆ ಆರಂಭಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.