ಸಿಂಧನೂರು: ಯುವ ಕಾಂಗ್ರೆಸ್ ಹಾಗೂ ಬಸನಗೌಡ ಬಾದರ್ಲಿ ಫೌಂಡೇಶನ್ ಸಹಯೋಗದಲ್ಲಿ ಗುರುವಾರ ಇಲ್ಲಿನ ಮಿನಿವಿಧಾನಸೌಧದ ಕಾರ್ಯಾಲಯದಲ್ಲಿ ತಹಶೀಲ್ದಾರ್ ಮಂಜುನಾಥ ಭೋಗಾವತಿ ಮುಖಾಂತರ ತಾಲ್ಲೂಕಾಡಳಿತಕ್ಕೆ ಐದು ಸಾವಿರ ಮಾಸ್ಕ್ ವಿತರಿಸಲಾಯಿತು.
ನಂತರ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ, ಕೊರೊನಾ ಸೋಂಕು ತಡೆಗೆ ಸರ್ಕಾರ ಘೋಷಿಸಿರುವ ಲಾಕ್ಡೌನ್ ಪರಿಣಾಮದಿಂದ ಬಡವರ, ಕೂಲಿಕಾರರ, ನಿರ್ಗತಿಕರ ಬದುಕು ಅತಂತ್ರ ಸ್ಥಿತಿಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ಯುವ ಕಾಂಗ್ರೆಸ್ ರಾಜ್ಯದಾದ್ಯಂತ ಮಾಸ್ಕ್, ಸ್ಯಾನಿಟೈಸರ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ಜನರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು.
ಸಿಂಧನೂರಿನಲ್ಲಿ 17 ದಿನಗಳಿಂದ ನಿರಂತರವಾಗಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳು, ಕರ್ತವ್ಯನಿರತ ಅಧಿಕಾರಿಗಳು, ಸಿಬ್ಬಂದಿಗೆ ಊಟ ನೀಡಲಾಗುತ್ತಿದೆ. ಸಿಂಧನೂರು ನಗರ ವ್ಯಾಪ್ತಿಯ 31 ವಾರ್ಡ್ಗಳಲ್ಲಿರುವ ಸುಮಾರು 10 ಸಾವಿರ ಬಡವರಿಗೆ ಕಿರಾಣಿ ಸಾಮಗ್ರಿಗಳ ಕಿಟ್ಗಳನ್ನು ಪೂರೈಕೆ ಮಾಡಲಾಗುವುದು ಎಂದರು.
ತಹಶೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ಜನರು ಅನಗತ್ಯವಾಗಿ ಹೊರಗಡೆ ತಿರುಗಾಡುವುದನ್ನು ನಿಲ್ಲಿಸಬೇಕು ಎಂದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ್, ನಗರಸಭೆ ಪೌರಾಯುಕ್ತ ವಿರೂಪಾಕ್ಷಿಮೂರ್ತಿ, ಡಾ.ಜೀವನೇಶ್ವರಯ್ಯ, ನಗರಸಭೆ ಸದಸ್ಯರಾದ ಮುರ್ತುಜಾಹುಸೇನ್, ಶರಣಪ್ಪ ಉಪ್ಪಲದೊಡ್ಡಿ, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಖಾಜಾಹುಸೇನ್ ರೌಡಕುಂದಾ, ಮುಖಂಡರಾದ ಬಾಬರ್ ಪಾಷಾ ವಕೀಲ, ಜಹೀರುಲ್ಲಾ ಹಸನ್ ವಕೀಲ, ಶಿವುಕುಮಾರ ಜವಳಿ, ಶಾಹೀನ್, ನಾಗರಾಜ ಕವಿತಾಳ, ನನ್ನು ಸಾಬ ಮೇಸ್ತ್ರಿ, ಇಲಿಯಜ್ ಪಟೇಲ್, ಪ್ರಭು ದೇವರಗುಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.