ADVERTISEMENT

ರಾಜಚೂರು: ಪೊಲೀಸರ ನಿಯಂತ್ರಣದಲ್ಲಿ ಜಿಲ್ಲೆ

ಜಿಲ್ಲೆಯ ಗಡಿಭಾಗಗಳಲ್ಲಿ ಸಂಚಾರ ಸ್ಥಗಿತ, ವಿವಿಧೆಡೆ ನಾಕಾಬಂದಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2020, 12:59 IST
Last Updated 24 ಮಾರ್ಚ್ 2020, 12:59 IST
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಪೊಲೀಸರು ಮಂಗಳವಾರ ನಾಕಾಬಂದಿ ಏರ್ಪಡಿಸಿದ್ದರು
ರಾಯಚೂರಿನ ಕೇಂದ್ರ ಬಸ್‌ ನಿಲ್ದಾಣ ಸಂಪರ್ಕಿಸುವ ರಸ್ತೆಯಲ್ಲಿ ಪೊಲೀಸರು ಮಂಗಳವಾರ ನಾಕಾಬಂದಿ ಏರ್ಪಡಿಸಿದ್ದರು   

ರಾಯಚೂರು: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಪೊಲೀಸರು ನಾಕಾಬಂದಿ ಏರ್ಪಡಿಸಿದ್ದು, ಅನಗತ್ಯವಾಗಿ ಸಂಚರಿಸುವವರನ್ನು ನಿಯಂತ್ರಿಸುತ್ತಿದ್ದಾರೆ.

ವೈದ್ಯಕೀಯ ಸೇವೆ, ಅಗತ್ಯ ವಸ್ತುಗಳ ಮಾರಾಟಗಾರರು ಸೇರಿದಂತೆ ತುರ್ತು ಕೆಲಸಕ್ಕೆ ತೆರಳುವವರನ್ನು ಮಾತ್ರ ಬಿಡಲಾಗುತ್ತಿದೆ. ಎಲ್ಲೆಡೆಯಲ್ಲೂ ಪೊಲೀಸ್‌ ವಾಹನಗಳ ಸದ್ದು ಮೊಳಗಿದ್ದು, ಜನದಟ್ಟಣೆ ಏರ್ಪಡುವುದಕ್ಕೆ ಅವಕಾಶ ಮಾಡುತ್ತಿಲ್ಲ. ಬಡಾವಣೆಗಳಲ್ಲಿ ಪೊಲೀಸರು ಗಸ್ತು ಆರಂಭಿಸಿದ್ದು, ಜನರು ಗುಂಪು ಕಟ್ಟಿಕೊಂಡು ನಿಲ್ಲದಂತೆ ತಾಕೀತು ಮಾಡುತ್ತಿದ್ದಾರೆ.

ನಗರದ ಎಲ್ಲ ಪ್ರಮುಖ ವೃತ್ತಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿದೆ. ರಾಯಚೂರಿನ ರೈಲ್ವೆ ನಿಲ್ದಾಣ, ಬಸವೇಶ್ವರ ವೃತ್ತ, ನವೋದಯ ಕಾಲೇಜು ವೃತ್ತದಲ್ಲಿ ಲಾರಿಗಳು ಕಾರುಗಳು, ಲಾರಿಗಳು ನಿಂತುಕೊಂಡಿವೆ. ಕೆಲವು ಜನರು ಪೊಲೀಸರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿರುವುದು ಕಂಡುಬಂತು.

ADVERTISEMENT

ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರನ್ನು ಕೆಲಕಾಲ ಕಾಯಿಸಿ ಬಿಡುತ್ತಿದ್ದಾರೆ. ನಾಳೆಯಿಂದ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಔಷಧಿ ಅಂಗಡಿಗಳು, ಪೆಟ್ರೊಲ್‌ ಬಂಕ್‌, ತರಕಾರಿ ಅಂಗಡಿಗಳು, ದಿನಪತ್ರಿಕೆ ಮಳಿಗೆ ಹಾಗೂ ಕಿರಾಣಿ ಅಂಗಡಿಗಳು ತೆರೆದುಕೊಂಡಿವೆ. ಆದರೆ, ಜನಸಂಚಾರ ನಿಯಂತ್ರಣ ಕಟ್ಟುನಿಟ್ಟು ಮಾಡಿರುವುದರಿಂದ ಮಳಿಗೆಗಳ ಎದುರು ಬೆರಳೆಣಿಕೆ ಜನರಿದ್ದಾರೆ.

ಪೊಲೀಸ್‌ ಗಸ್ತು ವಾಹನದ ಧ್ವನಿವರ್ಧಕದ ಮೂಲಕ ಜನರಿಗೆ ಸೂಚನೆಗಳನ್ನು ನೀಡಲಾಗುತ್ತಿದೆ. ಎಲ್ಲೆಡೆಯಲ್ಲೂ ಬಂದ್‌ ವಾತಾವರಣವಿದೆ. ರಾಯಚೂರು ಲಾಕ್‌ಡೌನ್‌ ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.