ಸಿರವಾರ: ‘ಕ್ಷಯ ರೋಗದ ಪರೀಕ್ಷೆ ಮತ್ತು ರೋಗಕ್ಕೆ ಔಷಧ ವಿತರಣೆ ಸರ್ಕಾರದಿಂದ ಸಂಪೂರ್ಣ ಉಚಿತವಾಗಿದ್ದು, ಪ್ರತಿಯೊಬ್ಬ ರೋಗಿಯು ಅದರ ಲಾಭ ಪಡೆದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಆಯುಷ್ ವೈದ್ಯಾಧಿಕಾರಿ ಸುನೀಲ ಸರೋದೆ ಹೇಳಿದರು.
ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮತ್ತು ಸಿರವಾರದ ಕ್ಷಯರೋಗ ನಿರ್ಮೂಲನ ಕೇಂದ್ರ ಸಹಯೋಗದಲ್ಲಿ ವಿಶ್ವ ಕ್ಷಯರೋಗ ದಿನ ಅಂಗವಾಗಿ ಸೋಮವಾರ ನಡೆದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ಷಯ ರೋಗ ನಿಯಂತ್ರಣ ಮೇಲ್ವಿಚಾರಕ ಪ್ರೇಮ ಕುಮಾರ ಮಾತನಾಡಿ, ‘ಎರಡು ವಾರಕ್ಕಿಂತ ಹೆಚ್ಚು ಕೆಮ್ಮು, ಸಂಜೆ ಸಮಯದಲ್ಲಿ ಜ್ವರ ಬರುವುದು, ಕಫ ಕಟ್ಟುವುದು, ಕಫದಲ್ಲಿ ರಕ್ತ ಬೀಳುವುದು, ಹಸಿವಾಗದಿರುವುದು, ತೂಕ ಕಡಿಮೆಯಾಗುವುದು, ಎದೆ ನೋವು ಕಾಣಿಸಿಕೊಳ್ಳುವುದು, ರಾತ್ರಿ ಬೆವರುವುದು ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣಬೇಕು. ಕ್ಷಯರೋಗ ದೃಢಪಟ್ಟರೆ ಸರಿಯಾಗಿ ಆರು ತಿಂಗಳು ಚಿಕಿತ್ಸೆ ಪಡೆದು ಕ್ಷಯರೋಗದಿಂದ ಮುಕ್ತರಾಗಬೇಕು’ ಎಂದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀದೇವಿ, ಎಲ್.ಟಿ.ಒ.ಪ್ರಕಾಶ, ಫಾರ್ಮಸಿಸ್ಟ್ ವಿದ್ಯಾರಾಣಿ, ತಿಮ್ಮಲಮ್ಮ, ಚನ್ನವೀರಮ್ಮ, ಸುಂದರಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.