ಸಿರವಾರ: ತಾಲ್ಲೂಕಿನ ಗಣದಿನ್ನಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಭೂಮಿಯನ್ನು ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ದಲಿತ ಸಂಘರ್ಷ ಸಮಿತಿ (ಎನ್.ಮೂರ್ತಿ) ಪದಾಧಿಕಾರಿಗಳು ಧರಣಿ ಆರಂಭಿಸಿದ್ದಾರೆ.
‘ಗಣದಿನ್ನಿ ಗ್ರಾಮದ ಸರ್ವೆ ನಂ.86ರ 5 ಎಕರೆ ಭೂಮಿಯನ್ನು ಸರ್ಕಾರ ಈಗಾಗಲೇ ಖರೀದಿಸಿದೆ. ಅದು ಇನ್ನೂ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಈ ಭೂಮಿಯನ್ನು ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಾಗಿದ್ದು, ಪಿಡಿಒ ಮತ್ತು ಕೆಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೂರಾರು ಬಡ ಎಸ್ಸಿ, ಎಸ್ಟಿ, ಹಿಂದುಳಿದ ಜನರು ಆಶ್ರಯ ಸ್ಥಳ ಪಡೆಯದೇ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಿ ಭೂಮಿಯಲ್ಲಿ ಅಧಿಕಾರಿಗಳ ಕುಮ್ಮಕ್ಕಿನಿಂದ ಖಾಸಗಿ ವ್ಯಕ್ತಿಗಳು ಬೆಳೆದಿದ್ದಾರೆ’ ಎಂದು ಧರಣಿನಿರತರು ಆರೋಪಿಸಿದರು
ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದು ಸಂಬಂಧಿಸಿದ ಆಶ್ರಯ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕು. 30 ವರ್ಷಗಳಿಂದಲೂ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್ ಮಲ್ಲೇಶನಿಂದ ಅಕ್ರಮ ನಡೆಯುತ್ತಿದ್ದು, ಕೂಡಲೇ ಅಮಾನತುಗೊಳಿಸಬೇಕು ಆಗ್ರಹಿಸಿ ಧರಣಿ ನಡೆಸುತ್ತಿದ್ದಾರೆ.
ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ನಂಜಲದಿನ್ನಿ, ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಎಂ.ಮನೋಹರ ಸಿರವಾರ, ರಾಜು ಬೊಮ್ಮನಾಳ, ತಾಲ್ಲೂಕು ಘಟಕದ ಅಧ್ಯಕ್ಷ ಚಂದಪ್ಪ ಕವಿತಾಳ, ಅಮರೇಶ ಮಲ್ಲಟ, ಮಲ್ಲಪ್ಪ ಮಲ್ಲಟ, ಹುಲಿಗೆಪ್ಪ ಸಿರವಾರ, ಹುಲಿಗೆಪ್ಪ ಸೈದಾಪೂರ, ಈರಣ್ಣ ನಾಯಕ ಗಣದಿನ್ನಿ, ಹನುಮಂತ ಬಲ್ಲಟಗಿ, ನರಸಿಂಗ, ಜಂಬಣ್ಣ, ಮೌನೇಶ ಕವಿತಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.