ರಾಯಚೂರು: ಶ್ರಾವಣಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮಿ ಪೂಜೆ ಹಿನ್ನೆಲೆಯಲ್ಲಿ ಮುನ್ನಾದಿನ ಗುರುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು.
ವರಮಹಾಲಕ್ಷ್ಮಿ ಪೂಜೆ ಮಾಡುವುದರಿಂದ ಮನೆಯಲ್ಲಿ ಅಷ್ಟ ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯನ್ನು ಜನರು ಹೊಂದಿದ್ದು, ಈ ಕಾರಣದಿಂದಾಗಿ ಭಕ್ತಿಯಿಂದ ವರಮಹಾಲಕ್ಷ್ಮಿ ಪೂಜೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದ ಮಾರುಕಟ್ಟೆಯಲ್ಲಿ ಬಾಳೆ ದಿಂಡು, ಮೋಸಂಬಿ, ದಾಳಿಂಬೆ, ಸಪೋಟಾ, ಪೇರಲ, ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳು, ಮಲ್ಲಿಗೆ, ಕನಕಾಂಬರಿ, ಶಾವಂತಿಗೆ, ಕ್ಯಾದಗಿ ಸೇರಿದಂತೆ ವಿವಿಧ ಹೂ ಖರೀದಿ ಜೋರಾಗಿತ್ತು. ಅಲ್ಲದೇ ಹೂವು ಹಾಗೂ ಹಣ್ಣುಗಳ ಬೆಲೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚೌಕಾಸಿ ಮಾಡುತ್ತಿರುವುದು ಕಂಡುಬಂದಿತು.
ಪೂಜೆಯಿಂದ ಅಷ್ಟ ಐಶ್ವರ್ಯ ಪಾಪ್ತಿ: ವರಮಹಾಲಕ್ಷ್ಮಿ ವ್ರತವು ಕೃಷ್ಣ ಧರ್ಮರಾಜನಿಗೆ ಮಾಡಿದ ಉಪದೇಶವಾಗಿದೆ. ಪಾಂಡವರು ವನವಾಸದಲ್ಲಿ ಇದ್ದಾಗ ಅದರಿಂದ ಪಾರಾಗಲು, ಅಷ್ಟೈಶ್ವರ್ಯ ಪಾಪ್ತಿಗಾಗಿ ಮಾಡಿರುವ ವ್ರತವಾಗಿದೆ. ಈ ವ್ರತವನ್ನು ಶ್ರಾವಣ ಮಾಸದ ಹುಣ್ಣಿಮೆಗೆ ಸಮೀಪದ ಶುಕ್ರವಾರದಂದು ಆಚರಣೆ ಮಾಡಲಾಗುತ್ತದೆ ಎಂದು ಸಂಸ್ಕೃತ ವಿದ್ವಾಂಸ ಮುಕುಂದಾಚಾರ ಜೋಶಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.