ADVERTISEMENT

ರಾಯಚೂರು | ಅರ್ಥವ್ಯವಸ್ಥೆ ಭವಿಷ್ಯದ ಭದ್ರತೆಗೆ ಅಗತ್ಯ: ಪ್ರೊ.ಶಿವಾನಂದ ಕೆಳಗಿನಮನಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:35 IST
Last Updated 11 ಜನವರಿ 2026, 6:35 IST
ರಾಯಚೂರು ತಾಲ್ಲೂಕಿನ ಯರಗೇರಾ ಸಮೀಪದ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಮೂಲ ಅರ್ಥಮಾಪನಶಾಸ್ತ್ರ ಪರಿಚಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು
ರಾಯಚೂರು ತಾಲ್ಲೂಕಿನ ಯರಗೇರಾ ಸಮೀಪದ ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಮೂಲ ಅರ್ಥಮಾಪನಶಾಸ್ತ್ರ ಪರಿಚಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಉದ್ಘಾಟಿಸಿದರು   

ರಾಯಚೂರು: ‘ಜೀವನ ಯೋಜನೆಗೆ ಅರ್ಥಶಾಸ್ತ್ರದ ಅನ್ವಯ ಮುಖ್ಯ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲ; ಹಣಕಾಸು ಭವಿಷ್ಯದ ಭದ್ರತೆಗೆ ಅಗತ್ಯವಾಗಿದೆ’ ಎಂದು ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶಿವಾನಂದ ಕೆಳಗಿನಮನಿ ಹೇಳಿದರು.

ಆದಿಕವಿ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ಆಯೋಜಿಸಲಾಗಿದ್ದ ‘ಮೂಲ ಅರ್ಥಮಾಪನಶಾಸ್ತ್ರ ಪರಿಚಯ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಅರ್ಥಶಾಸ್ತ್ರವು ಹಣಕಾಸು ನಿರ್ವಹಣೆಯಿಂದ ಹಿಡಿದು ರಾಷ್ಟ್ರೀಯ, ಜಾಗತಿಕಮಟ್ಟದ ನೀತಿಗಳವರೆಗೆ ನಮ್ಮ ಜೀವನದ ಪ್ರತಿ ಹಂತದಲ್ಲೂ ಪ್ರಮುಖ ಪಾತ್ರ ವಹಿಸುತ್ತದೆ. ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿಯನ್ನು ತಿಳಿಸುವ ಆಧುನಿಕ ವಿಧಾನಗಳವರೆಗೆ ವಿಕಾಸಗೊಂಡಿರುವ ಅರ್ಥಶಾಸ್ತ್ರ ನೀತಿಗಳನ್ನು ರೂಪಿಸುವಲ್ಲಿ ಮತ್ತು ಬಡತನ, ಹಣದುಬ್ಬರ ಹಾಗೂ ನಿರುದ್ಯೋಗದಂತಹ ಸಮಕಾಲೀನ ಸವಾಲುಗಳನ್ನು ಪರಿಹರಿಸುತ್ತದೆ’ ಎಂದು ಹೇಳಿದರು.

ADVERTISEMENT

‘ಯಾವುದೇ ಒಂದು ವಿಷಯವನ್ನು ವಿವಿಧ ಆಯಾಮಗಳಿಂದ ಗಮನಿಸಿ ಅಧ್ಯಯನ ಮಾಡಿದಾಗ ಆಯಾ ವಿಷಯಗಳಲ್ಲಿ ಪರಿಣತಿ ಹೊಂದಲು ಸಾಧ್ಯ. ವಿದ್ಯಾರ್ಥಿಗಳಿಗೆ ಹಣಕಾಸು ನಿರ್ವಹಣೆಯ ಕೌಶಲಗಳನ್ನು ತಿಳಿದುಕೊಳ್ಳಲು ಆರ್ಥಿಕ ಸಾಕ್ಷರತೆ ಅರಿವು ಪ್ರಧಾನವಾಗಿರಬೇಕು. ಜೊತೆಗೆ ಪಠ್ಯ ವಿಷಯಗಳನ್ನು ಮೀರಿ ವಿಶಾಲ ಜ್ಞಾನ ಅಗತ್ಯವಿದ್ದು, ವಿಮರ್ಶಾತ್ಮಕ ಚಿಂತನೆ, ಜೀವನ ಕೌಶಲ ಭಿವೃದ್ಧಿಪಡಿಸಿಕೊಳ್ಳಲು ಅವರನ್ನು ಸುಸಜ್ಜಿತ ಮತ್ತು ಸಂಕೀರ್ಣ ಜಗತ್ತಿಗೆ ಸಿದ್ಧಗೊಳಿಸಲು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿಯ ಅರ್ಥಶಾಸ್ತ್ರ ವಿಭಾಗದ ಹಿರಿಯ ಪ್ರಾಧ್ಯಾಪಕ ರಂಗಪ್ಪ ಕೆ.ಬಿ. ಉಪನ್ಯಾಸ ನೀಡಿ, ‘ಅರ್ಥವ್ಯವಸ್ಥೆಯ ತಾಯಿಬೇರು ಅರ್ಥಶಾಸ್ತ್ರವಾಗಿದೆ. ಸಿಗದಿರುವುದರ ಬಗ್ಗೆ ಚಿಂತಿಸದೆ, ನಿಮ್ಮ ಸಾಮರ್ಥ್ಯದ ಕೆಲಸಗಳಿಗೆ ಒತ್ತು ನೀಡಿ. ಪ್ರಸ್ತುತ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ವೃತ್ತಿ ಕೌಶಲಗಳನ್ನು ಕಲಿತು, ನಿಮ್ಮ ಜೀವನ ಯೋಜನೆಗಳನ್ನು ರೂಪಿಸಿಕೊಳ್ಳಿ’ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪ್ರೊ.ಪಿ.ಭಾಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪಾರ್ವತಿ ಸಿ.ಎಸ್ ಮಾತನಾಡಿದರು. ಗ್ರಂಥಪಾಲಕರಾದ ಡಾ.ಜಿ.ಎಸ್.ಬಿರಾದಾರ, ವಿಭಾಗದ ಉಪನ್ಯಾಸಕ ಶಂಕರಾನಂದ.ಜಿ, ದುರುಗಪ್ಪ ಗಣೇಕಲ್ ಹಾಗೂ ಶಿವರಾಜ ಹರವಿ ಉಪಸ್ಥಿತರಿದ್ದರು.

ಡಾ.ನಾಗರಾಜ ಕೆ. ಪರಿಚಯಿಸಿದರು, ರಾಮಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನರಸಮ್ಮ ಪ್ರಾರ್ಥಿಸಿದರು. ರಾಮಾಂಜನೇಯ ಸ್ವಾಗತಿಸಿದರು. ಸಂಗೀತಾ ನಿರೂಪಿಸಿದರು. ಮಹೇಂದ್ರ ಕುಮಾರ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.