ADVERTISEMENT

ಕಾಲಕ್ಕೆ ಅನುಗುಣ ಚುನಾವಣೆ ಸೂಚನೆ: ಎನ್.ಜಯರಾಮ

ವಿಧಾನ ಪರಿಷತ್ ಚುನಾವಣೆ; ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 13:21 IST
Last Updated 4 ಡಿಸೆಂಬರ್ 2021, 13:21 IST
ರಾಯಚೂರಿನ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಧಾನ ಪರಿಷತ್‌ ಚುನಾವಣೆ ಕಾರ್ಯಕ್ಕೆ ನಿಯೋಜಿತರಾದದ ಮತಗಟ್ಟೆ ಅಧಿಕಾರಿಗಳಿಗೆ ಶನಿವಾರ ತರಬೇತಿ ನೀಡಲಾಯಿತು
ರಾಯಚೂರಿನ ಪಂಡಿತ್‌ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಧಾನ ಪರಿಷತ್‌ ಚುನಾವಣೆ ಕಾರ್ಯಕ್ಕೆ ನಿಯೋಜಿತರಾದದ ಮತಗಟ್ಟೆ ಅಧಿಕಾರಿಗಳಿಗೆ ಶನಿವಾರ ತರಬೇತಿ ನೀಡಲಾಯಿತು   

ರಾಯಚೂರು: ಚುನಾವಣೆ ಸೂಚನೆಗಳು ಕಾಲಕಾಲಕ್ಕೆ ಗಣನೀಯವಾಗಿ ಬದಲಾಗುತ್ತಿದ್ದು, ಅಧಿಕಾರಿಗಳು ಎಷ್ಟೇ ತರಬೇತಿ ಪಡೆದಿದ್ದರೂ ಕೆಲವು ವಿಷಯಗಳನ್ನು ಮತ್ತೆ ಮತ್ತೆ ಕಲಿಯುವ ಮೂಲಕ ಚುನಾವಣೆ ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಎಂದು ವಿಧಾನ ಪರಿಷತ್ ರಾಯಚೂರು, ಕೊಪ್ಪಳ ಮತಕ್ಷೇತ್ರದ ಚುನಾವಣಾ ವೀಕ್ಷಕ ಎನ್.ಜಯರಾಮ ಹೇಳಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವಿಧಾನ ಪರಿಷತ್ ಚುನಾವಣೆಯಕಾರ್ಯಕ್ಕೆ ನಿಯೋಜನೆಗೊಂಡ ಮತಗಟ್ಟೆ ಅಧಿಕಾರಿಗಳು, ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಶನಿವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಮತಗಟ್ಟೆ ಅಧಿಕಾರಿಗಳು ಮತದಾನದ ಹಿಂದಿನ ಮತಗಟ್ಟೆಗೆ ಬಂದ ನಂತರ, ಮತದಾನದ ದಿನದಂದು ಹಾಗೂ ಮತದಾನದ ವೇಳೆಯಲ್ಲಿ ಮತ್ತು ಮತದಾನ ಪೂರ್ಣಗೊಂಡ ನಂತರ ವಿವಿಧ ಹಂತಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ADVERTISEMENT

ಈ ಚುನಾವಣೆಯಲ್ಲಿ ಕರ್ತವ್ಯದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮತಪೆಟ್ಟಿಗೆಯನ್ನು ಬಳಸುವ ರೀತಿ ಮತ್ತು ವಿಧಾನವನ್ನು ಸರಿಯಾಗಿ ತರಬೇತಿಯಲ್ಲಿಯೇತಿಳಿದುಕೊಳ್ಳಬೇಕು. ಶಾಸನಬದ್ಧ ಮತ್ತು ಶಾಸನಬದ್ದವಲ್ಲದ ನಮೂನೆಗಳನ್ನು ತಿಳಿದಕೊಳ್ಳಬೇಕು. ಯಾವುದೇ ಸಂದೇಹ ಉಂಟಾದರೆ ಮೇಲಧಿಕಾರಿಗಳಿಂದ ಮಾಹಿತಿ ಪಡೆದು ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿಗದಿಪಡಿಸಿದ ಮಸ್ಟರಿಂಗ್ ಕೇಂದ್ರದಲ್ಲಿ ಡಿಸೆಂಬರ್ 9ರಂದು ಸರಿಯಾದ ಸಮಯಕ್ಕೆ ಹಾಜರಾಗಬೇಕು. ತಿಳಿಸಿದ ಸ್ಥಳ ಮತ್ತು ಸಮಯದಲ್ಲಿ ಸೇರಬೇಕು. ಪರಿಶೀಲನಾ ಪಟ್ಟಿಯ ಪ್ರಕಾರ ಚುನಾವಣಾ ಸಾಮಾಗ್ರಿಗಳು ಸರಿಯಾಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಮತಗಟ್ಟೆಯಲ್ಲಿ ನೋಟೀಸ್ ಬೋರ್ಡನಲ್ಲಿ ಮತದಾನದ ಪ್ರದೇಶವನ್ನು ನಿರ್ದಿಷ್ಟಪಡಿಸಿದ ನೋಟಿಸ್‌ನ್ನು ಮತ್ತು ಮತಗಟ್ಟೆಯಲ್ಲಿ ಮತ ಚಲಾಯಿಸುವ ಮತದಾರರ ವಿವರ ಹಾಕಬೇಕು. ನಮೂನೆಯಲ್ಲಿ ಸ್ಪರ್ದಿಸುವ ಉಮೇದುವಾರರ ಹೆಸರು ಮತ್ತು ಚಿನ್ಹೆಗಳ ವಿವರಗಳನ್ನು ಪ್ರದರ್ಶಿಸಬೇಕು. ಮತಗಟ್ಟೆ ಕೊಠಡಿಯಿಂದ ಗುರುತು ಹಾಕಬೇಕು. 100 ಮೀ. ಒಳಗಡೆ ಯಾವುದೇ ಪಕ್ಷದ ಅಥವಾ ಉಮೇದುವಾರರ ಭಿತ್ತಿ ಪತ್ರ ಪೋಸ್ಟರ್ಸ್ಸ್ ಇತರೆ ಯಾವುದಾದರೂ ಇದ್ದಲ್ಲಿ ತೆಗೆದು ಹಾಕಬೇಕು. ಎಲ್ಲಾ ಸಿಬ್ಬಂದಿಯೊಂದಿಗೆ ಮತಗಟ್ಟೆಗೆ ತಲುಪಿದ ತಕ್ಷಣ ಪುನಃ ಚುನಾವಣೆಯ ಎಲ್ಲಾ ಸಾಮಾಗ್ರಿಗಳನ್ನು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.

ಮತಗಟ್ಟೆ ಒಳಗಡೆ ಮತದಾರರನ್ನು ಗುರುತಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಒಬ್ಬ ಅಧಿಕಾರಿ ನೌಕರರನ್ನು ಮತದಾರರನ್ನು ಗುರುತಿಸುವ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿರುತ್ತದೆ. ಅವರು ಮತದಾರರನ್ನು ಗುರುತಿಸುವ ಕಾರ್ಯ ನಿರ್ವಹಿಸುವರು. ಮತಗಟ್ಟೆ ಕೊಠಡಿ ಪರಿಶೀಲಿಸಿ ಯಾವುದೇ ಧರ್ಮದ, ಇನ್ನಿತರ ಚಿತ್ರಗಳು ತೆಗೆಯಿಸಬೇಕು. ಮತಗಟ್ಟೆ ಸಿಬ್ಬಂದಿ ಮತ್ತು ಏಜೆಂಟರು ಕುಳಿತುಕೊಳ್ಳುವ ಸ್ಥಳಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಮತಪೆಟ್ಟಿಗೆಗಾಗಿ ಸೂಕ್ತ ಸ್ಥಳದ ವ್ಯವಸ್ಥೆ ಮಾಡಬೇಕು. ಮತಗಟ್ಟೆ ಒಳಗಡೆ ಮೊಬೈಲ್ ಬಳಸಬಾರದು ಎನ್ನುವ ವಿವಿಧ ನಿಯಮಗಳನ್ನು ಅಧಿಕಾರಿಗಳು ಕಡ್ಡಾಯ ಪಾಳಿಸಬೇಕು ಎಂದರು.

ಮತದಾನ ಪೂರ್ಣಗೊಂಡ ನಂತರ ಮತದಾನ ಮಾಡಲು ನಿರ್ದಿಷ್ಟ ಪಡಿಸಿದ ಅಂತಿಮ ಘಳಿಗೆಯಲ್ಲಿ ಹಾಜರಿರುವ ಎಲ್ಲಾ ಮತದಾರರು ಮತ ನೀಡಿದ ನಂತರ, ಮತದಾನವು ಪೂರ್ಣಗೊಂಡ ಬಗ್ಗೆ ಔಪಚಾರಿಕವಾಗಿ ಘೋಷಿಸಿ, ನಂತರ ಮತಪೆಟ್ಟಿಗೆಯನ್ನು ಮೊಹರು ಮಾಡಬೇಕು. ಮತದಾರರಿಗೆ ಕೊಟ್ಟ ಮತಪತ್ರಗಳ ಸಂಖ್ಯೆಯನ್ನು ಪರಿಶೀಲಿಸಿ, ವಿವರವನ್ನು ಮತಪತ್ರಗಳ ಲೆಕ್ಕ ನಮೂನೆಯಲ್ಲಿ ನಿಖರವಾಗಿ ನಮೂದಿಸಬೇಕು. ಮತಪತ್ರಗಳ ಲೆಕ್ಕ ನಮೂನೆಗಳನ್ನು ಹಾಜರಿರುವ ಮತಗಟ್ಟೆ ಏಜೆಂಟರಿಗೆ ನೀಡಿ ಸಹಿ ಪಡೆದುಕೊಳ್ಳಬೇಕು. ಚುನಾವಣೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಶೀಲ್ದಾರ್ರಾದ ಡಾ.ಹಂಪಣ್ಣ ಸಜ್ಜನ್, ಮಂಜುನಾಥ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೃಷಬೇಂದ್ರಯ್ಯ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕಾರ್ಯಾಗಾರದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.